Thursday, April 23, 2020

ತಬ್ಬಲಿಯು ನೀನಾದೆ ಮಗನೆ

ಎಷ್ಟೋ ವರುಷಗಳ ಹಿಂದೆ ಕೊಂಡ ಪುಸ್ತಕಗಳನ್ನು ಈ ಲಾಕ್ ಡೌನ್ ಸಮಯದಲ್ಲಿ ಓದಲು ಸಾಧ್ಯವಾಗುತ್ತಿದೆ. ಅಂತಹುದೇ ಒಂದು ಪುಸ್ತಕ "ತಬ್ಬಲಿಯು ನೀನಾದೆ ಮಗನೆ". ಈ ಕಾದಂಬರಿಯ ಲೇಖಕರು ಡಾಕ್ಟರ್ ಎಸ್ ಎಲ್ ಭೈರಪ್ಪ ಅವರು .ಗೋಪಾಲನೆ,ಗೋ ಸಂರಕ್ಷಣೆ ಮತ್ತು ಗೋಪಾಲಕರ ಜೀವನಚರಿತ್ರೆ ಈ ಕಾದಂಬರಿಯ ಮೂಲವಸ್ತು. ತಬ್ಬಲಿಯು ನೀನಾದೆ ಮಗನೆ ಕಾದಂಬರಿಯು ಬಿ ವಿ ಕಾರಂತರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಮೂಡಿ ಬಂದಿದೆ. ಕಾದಂಬರಿ ಓದದೇ ಚಲನಚಿತ್ರವನ್ನು ನೋಡಬಾರದು ಎಂಬ ಉದ್ದೇಶದಿಂದ ಮೊದಲು ಕಾದಂಬರಿಯನ್ನು ಓದಿ ಆನಂತರ ಚಲನಚಿತ್ರವನ್ನ ನೋಡಿದೆ .ಕಾದಂಬರಿಗೂ ಮತ್ತು ಚಲನಚಿತ್ರಕ್ಕೂ ಬಹಳ ವ್ಯತ್ಯಾಸಗಳು ಕಂಡುಬಂದಿದ್ದು ಕಾದಂಬರಿಯೇ ಚಲನಚಿತ್ರಕ್ಕಿಂತ ಬಹಳ ಉತ್ತಮವಾಗಿದೆ ಎಂಬುದು ನನ್ನ ಅನಿಸಿಕೆ. ಭಾರತ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ಗೋವಿನ ಬಗೆಗಿನ ನಂಬಿಕೆಗಳು ಬಹಳ ವಿಭಿನ್ನವಾಗಿದೆ. ಭಾರತದಲ್ಲಿ ಗೋವು ಮಾತೃಸ್ಥಾನದಲ್ಲಿದ್ದು ಪೂಜನೀಯವಾಗಿದ್ದರೆ, ಪಾಶ್ಚಾತ್ಯ ದೇಶಗಳಲ್ಲಿ ಅದು ಕೇವಲ ಒಂದು ಪ್ರಾಣಿಯಾಗಿಯೂ ಮತ್ತು ಮನುಷ್ಯನಿಗೆ ಆಹಾರವಾಗಿಯೂ ಪರಿಗಣಿಸಲ್ಪಡುತ್ತದೆ. "ಧರಣಿ ಮಂಡಲ ಮಧ್ಯದೊಳಗೆ " ಎಂಬ ಗೋವಿನ ಹಾಡಿನಲ್ಲಿ ಉಲ್ಲೇಖಿಸಲ್ಪಡುವ ಕಾಳಿಂಗ ಎಂಬ ಹೆಸರನ್ನೇ ಹಿಡಿದು ಭೈರಪ್ಪ ಅವರು ಕಥೆಯನ್ನು ಪ್ರಾರಂಭಿಸುತ್ತಾರೆ. ಕಾಳಿಂಗನ ವಂಶ ಗೋಪಾಲಕರ ವಂಶವಾಗಿದ್ದು , ಅವರ ದೊಡ್ಡಿಯಲ್ಲಿ ಪುಣ್ಯಕೋಟಿ ತಳಿಯ ಹಸುಗಳಿರುತ್ತವೆ. ತಾತ ಮೊಮ್ಮಕ್ಕಳು ಒಂದೇ ಹೆಸರಿನಿಂದ ಕರೆಯಲ್ಪಡುತ್ತಾರೆ . ದೊಡ್ಡ ಕಾಳಿಂಗನನ್ನು ಗೌಡಜ್ಜ ಎಂದು ಕರೆದು, ಮೊಮ್ಮಗ ಕಾಳಿಂಗನನ್ನು ಪುಟ್ಟ ಕಾಳಿಂಗ ಮತ್ತು ಆ ನಂತರ ಕಾಳಿಂಗ ಎಂದು ಕರೆಯಲ್ಪಡುತ್ತಾ , ತಲೆಮಾರಿನಲ್ಲಿ ಆಗುವ ಬದಲಾವಣೆಗಳನ್ನು ಬಹಳ ಸೂಚ್ಯವಾಗಿ ಭೈರಪ್ಪನವರು ತೋರಿಸುತ್ತಾ ಹೋಗುತ್ತಾರೆ. ಜೈಮಿನಿಯನ್ನು ಓದಬಲ್ಲ ಗೌಡಜ್ಜಊರಿಗೆ ಹಿರಿಯ ಮತ್ತು ಗೋಪಾಲಕರಲ್ಲಿ ಬಹಳ ಪ್ರಮುಖ. ಎಕರೆಗಟ್ಟಲೆ ಜಮೀನು ಮತ್ತು ಗೋಮಾಳ ವನ್ನು ಹೊಂದಿದ ಅವನು ಗೋವನ್ನು ತನ್ನ ತಾಯಿ ಅಕ್ಕ ತಂಗಿ ಬಂಧು ಬಾಂಧವರಂತೆ ಭಾವಿಸಿರುತ್ತಾನೆ. ಒಂದು ದುರದೃಷ್ಟಕರ ಘಟನೆಯಲ್ಲಿ ತನ್ನ ಮಗನನ್ನು ಕಳೆದುಕೊಳ್ಳುವ ಗೌಡ ತನ್ನ ಮೊಮ್ಮಗನನ್ನು ಬಹಳ ಪ್ರೀತಿಯಿಂದ ಬೆಳೆಸಿ ಅವನು ಇನ್ನೂ ಹೆಚ್ಚು ಓದಲಿ ಎಂಬ ಏಕೈಕ ಆಸೆಯಿಂದ ಮೊಮ್ಮಗನಿಗೆ ಶಾಲೆಯಲ್ಲಿ ಇಂಗ್ಲಿಷನ್ನು ಓದಿಸುತ್ತಾನೆ. ಊರ ಜೋಯಿಸರ ಮಗ ವೆಂಕಟರಮಣ ಕೂಡ ಸಂಸ್ಕೃತವನ್ನು ಓದಲು ಮೈಸೂರಿಗೆ ಹೋದ ನಂತರ ತನ್ನ ಮೊಮ್ಮಗನನ್ನು ಸ ಕಳಿಸಲು ಗೌಡ ಬಹಳ ಕಷ್ಟದಿಂದ ಒಪ್ಪಿಕೊಳ್ಳುತ್ತಾನೆ. ಆದರೆ ಅಲ್ಲಿ ಹೋದಮೇಲೆ ಮೊಮ್ಮಗ ಪುಟ್ಟ ಕಾಳಿಂಗನ ಯೋಚನೆ ಮತ್ತು ಬದುಕಿನ ಶೈಲಿ ಬದಲಾಗಿ ಅವನು ಉನ್ನತ ವ್ಯಾಸಂಗಕ್ಕಾಗಿ ಅಮೇರಿಕೆಗೆ ಹೋಗುತ್ತಾನೆ. ಇತ್ತ ಊರಿನಲ್ಲಿ ಹಲವಾರು ಬದಲಾವಣೆಗಳು ಆಗಿ ಗೌಡಜ್ಜ ತನ್ನ ಗೋಮಾಳವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಮಧ್ಯದ ದಾರಿಯನ್ನು ಹುಡುಕಿ ಗೋಮಾಳವನ್ನು ಸಂರಕ್ಷಿಸುವಲ್ಲಿ ಗೌಡ ತಕ್ಕಮಟ್ಟಿಗೆ ಯಶಸ್ವಿಯಾಗುತ್ತಾನೆ. ತನ್ನ ದೊಡ್ಡಿಯಲ್ಲಿ ಪುಣ್ಯಕೋಟಿ ತಳಿಯ ಹಸು ಇರುವುದರಿಂದ ಪುಣ್ಯಕೋಟಿಗೆ ಒಂದು ದೇವಸ್ಥಾನವನ್ನು ಕಟ್ಟಿಸಬೇಕು ಎಂಬ ಉದ್ದೇಶದಿಂದ ಬೆಟ್ಟದ ಮೇಲೆ ಪುಣ್ಯಕೋಟಿ ಮತ್ತು ಅರ್ಬುದ ಎಂಬ ವ್ಯಾಘ್ರ ಇತ್ತು ಎಂದು ನಂಬಲಾದ ಒಂದು ಗುಹೆಯ ಬಳಿ ಪುಣ್ಯಕೋಟಿ ದೇವಸ್ಥಾನವನ್ನು ಕಟ್ಟಿಸಬೇಕೆಂದು ಅವನು ಸಂಕಲ್ಪ ಮಾಡುತ್ತಾನೆ. ಊರವರೆಲ್ಲರ ಸಹಾಯದಿಂದ ಒಂದು ದೇವಸ್ಥಾನ ಮತ್ತು ಒಂದು ಕಲ್ಯಾಣಿ ಏರ್ಪಟ್ಟು ಪ್ರಾಣಪ್ರತಿಷ್ಠಾಪನೆ ಎಲ್ಲವೂ ಸಹ ಆಗುತ್ತದೆ.ಇದೆಲ್ಲಾ ಆದರೂ ಕಾಳಿಂಗ ಅಮೇರಿಕೆಯಿಂದ ಬಂದೇ ಇರುವುದಿಲ್ಲ .ತಾನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದ ಗೋಮಾಳವನ್ನು ಕಡೆಗೂ ಸರ್ಕಾರದವರು ಪಡೆದುಕೊಂಡು ಅದನ್ನು ಇಬ್ಭಾಗವಾಗಿಸಿ ತನ್ನ ಮಗ ಹಾಗೂ ಒಂದು ಪುಣ್ಯಕೋಟಿ ಹಸುವಿನ ಸಮಾಧಿಯನ್ನು ಸಹ ಕೆಡಿಸಿ ಬಿಟ್ಟು ಅಲ್ಲೆ ರಸ್ತೆಯನ್ನು ಹಾಕುವುದಾಗಿ ಆದೇಶ ಬಂದಾಗ ದುಃಖವನ್ನು ತಡೆಯಲಾರದೆ ಗೌಡಜ್ಜನ ಹೆಂಡತಿ ಸತ್ತು ಹೋಗುತ್ತಾಳೆ. ಗೋಮಾಳ ಇಬ್ಭಾಗವಾದ ನಂತರ ಆ ದುಃಖವನ್ನು ತಡೆಯಲಾರದೆ ಗೌಡಜ್ಜ ಸಹ ತೀರಿ ಹೋಗುತ್ತಾನೆ.

 ಗೌಡ ತೀರಿಹೋದ ಎಂದು ಟೆಲಿಗ್ರಾಂ ಮೂಲಕ ವಿಷಯ ತಿಳಿದುಕೊಳ್ಳುವ ಪುಟ್ಟ ಕಾಳಿಂಗ ಅವನ ತಿಥಿಯ ಸಮಯಕ್ಕೆ ಊರು ತಲಪುತ್ತಾನೆ. ತಾನು ತಲೆಬೋಳಿಸಿಕೊಂಡು ತಿಥಿ ಮಾಡುವುದಿಲ್ಲವೆಂದು ಹಠ ಮಾಡುವ ಕಾಳಿಂಗ ತಾನು ಬದಲಾಗಿದ್ದಾನೆ ಎಂಬುದ ಬಂದ ತಕ್ಷಣವೇ ಊರಿಗೆ ತೋರಿಸಿಬಿಡುತ್ತಾನೆ. ಗೋಮಾಳದ ಜಾಗದ ಬದಲಾಗಿ ಬೆಟ್ಟದ ತಪ್ಪಲಿನ ಜಮೀನೆಲ್ಲವನ್ನು ಪಡೆದುಕೊಳ್ಳುವ ಪುಟ್ಟ ಕಾಳಿಂಗ ಒಂದು ಫಾರ್ಮ್ ಹೌಸ್ ಅನ್ನು ಕಟ್ಟಿಕೊಂಡು ಹಸುಗಳನ್ನೆಲ್ಲಾ ಒಂದು ಹೊಸದೊಡ್ಡಿಯಲ್ಲಿ ಸೇರಿಸುತ್ತ ತನ್ನ ಮೂಗಿ ತಾಯಿ ತಾಯವ್ವನ ಕೋಪಕ್ಕೆ ಗುರಿಯಾಗುತ್ತಾನೆ. ಯಾರಿಗೂ ತಿಳಿಸದೆ ಅಮೇರಿಕೆಯಲ್ಲಿ ಅಮೇರಿಕನ್ ಒಬ್ಬಳನ್ನು ಮದುವೆಯಾಗಿರುತ್ತಾನೆ. ಅವನಿಗೆ ಎಂಟು ತಿಂಗಳ ಒಂದು ಮಗುವು ಸಹ ಇರುತ್ತದೆ. ತನ್ನ ಗೆಳೆಯ ವೆಂಕಟರಮಣ ಈ ಊರಿನ ಅರ್ಚಕನಾಗಿರುತ್ತಾನೆ. ಅವನಿಗೆ ಈ ವಿಷಯವನ್ನು ತಿಳಿಸುವ ಪುಟ್ಟ ಕಾಳಿಂಗ ಹಲವಾರು ಘಟನೆಗಳ ಮೂಲಕ ವೆಂಕಟರಮಣನ ಕೋಪಕ್ಕೂ ಸಹ ಗುರಿಯಾಗುತ್ತಾನೆ . ಕಾಳಿಂಗನ ಹೆಂಡತಿ ಹಿಲ್ಡಾ ಳ ಆಗಮನವಾದ ನಂತರ ಪರಿಸ್ಥಿತಿ ಬಹಳ ಬದಲಾಗುತ್ತದೆ. ಅವರ ಹೊಸ ಫಾರ್ಮ್ಹೌಸ್ನಲ್ಲಿ ಜಮೀಲ ಎಂಬ ಮುಸ್ಲಿಮ್ ಕುಟುಂಬ ವಾಸವಾಗಿ ಕೋಳಿ ಸಾಕಾಣಿಕೆಯಲ್ಲಿ ನಿರತವಾಗಿರುತ್ತದೆ. ಇಲ್ಲಿ ಬಂದ ಮೇಲೆ ಹಿಲ್ಡಾ ವೆಂಕಟರಮಣನ ಸ್ನೇಹವನ್ನು ಬಯಸಲು ಹೋಗಿ ಅಪಾರ ಅವಮಾನಗಳಿಗೆ ತುತ್ತಾಗುತ್ತಾಳೆ .ಅಷ್ಟು ಹೊತ್ತಿಗೆ ಈಗ ಮತ್ತೆ ಗರ್ಭಿಣಿಯಾಗಿರುತ್ತಾಳೆ .ಐದು ತಿಂಗಳ ಬಸರಿ ಒಂದು ದಿನ ವೆಂಕಟರಮಣನಿಂದ ಅವಮಾನಕ್ಕೊಳಗಾಗಿ ಇವರು ಪೂಜಿಸುವ ಪುಣ್ಯಕೋಟಿ ಹಸುವಿನಲ್ಲಿ ನಿಜವಾಗಿಯೂ ಮೂವತ್ಮೂರು ಕೋಟಿ ದೇವತೆಗಳು ಇದ್ದಾರೆಯೇ ಎಂದು ಲೇವಡಿ ಮಾಡುತ್ತಾ ಪುಣ್ಯಕೋಟಿ ಹಸುವೊಂದನ್ನು ತಿನ್ನಬೇಕೆಂದು ಜಮೀಲನಿಗೆ ಹೇಳುತ್ತಾಳೆ. ಈ ಮಾತನ್ನು ಕೇಳಿ ಹೆದರುವ ಜಮೀಲ ಈ ಕೆಲಸವನ್ನು ತಾನು ಮಾಡಲಾರ ಎಂದು ತಿಳಿಸುತ್ತಾನೆ . ಹಿಲ್ಡಾ ಬಹಳ ಬಲವಂತಮಾಡಿ ಜಮೀಲನ ಕೈಲಿ ಗೋಹತ್ಯೆ ಮಾಡಿಸುತ್ತಾಳೆ. ಆದರೆ ಅವಳು ಪುಣ್ಯಕೋಟಿಯ ಮಾಂಸವನ್ನು ತಿನ್ನಲಾರಳಾಗುತ್ತಾಳೆ. ಅದೇ ರಾತ್ರಿ ಕಾಳಿಂಗನಿಗೆ ಗೋಮಾಂಸವನ್ನು ಬಡಿಸುತ್ತಾ ತಾನು ಪುಣ್ಯಕೋಟಿಯನ್ನು ಸಾಯಿಸಿದ್ದೇನೆ ಎಂಬ ವಿಷಯವನ್ನು ಮುಚ್ಚಿಟ್ಟು ಕಾಳಿಂಗನ ಮನಸ್ಸನ್ನು ಬೇರೆಡೆ ಹರಿಸುವಲ್ಲಿ ಅವಳು ಯಶಸ್ವಿಯಾಗುತ್ತಾಳೆ. ಆದರೆ ಊರಿನ ಜನರಿಗೆ ಈ ವಿಷಯ ಗೊತ್ತಾಗಿ ದೊಡ್ಡ ರಾದ್ಧಾಂತ ನಡೆಯುತ್ತದೆ ಪುಣ್ಯಕೋಟಿಯನ್ನು ಸಾಯಿಸಿದ್ದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಂಡ ಕಾಳಿಂಗ ಹಿಲ್ಡಾ ದೃಷ್ಟಿಯಲ್ಲಿ ಬಹಳ ಕೇವಲವಾಗಿ ಬಿಡುತ್ತಾನೆ . ಗಂಡಹೆಂಡತಿಯರಿಗೆ ಘೋರವಾದ ಜಗಳವಾಗುತ್ತದೆ ಮುಂದೇನಾಯಿತೆಂದು ತಿಳಿಯಲೇ ಪುಸ್ತಕವನ್ನು ಓದಿ.

 ಈ ಕಾದಂಬರಿಯಲ್ಲಿ ನಮ್ಮನ್ನು ಬಹಳವಾಗಿ ಕಾಡುವ ಪಾತ್ರ ತಾಯವ್ವ ನದು . ಅವಳು ಮೂಕಿ ಯಾಗಿದ್ದರೂ ಸಹ ಅವಳ ಪಾತ್ರ ಪೋಷಣೆಯನ್ನು ಭೈರಪ್ಪ ಬಹಳ ಮನೋಜ್ಞವಾಗಿ ಮಾಡಿದ್ದಾರೆ. ತಾಯವ್ವನ ಪಾತ್ರದ ನಂತರ ನಮ್ಮನ್ನು ಮತ್ತಷ್ಟು ಕಾಡುವ ಪಾತ್ರಗಳು ಗೌಡಜ್ಜ, ಹಿರಿಯ ಮತ್ತು ಕಿರಿಯ ಜೋಯಿಸರದ್ದು. ಇಂತಹ ಅದ್ಭುತ ಕಾದಂಬರಿಯನ್ನು ಬರೆದ ಭೈರಪ್ಪನವರಿಗೆ ಎಷ್ಟು ಅಭಿನಂದನೆಗಳನ್ನು ಹೇಳಿದರೂ ಸಾಲದು. ಗೋಸಂರಕ್ಷಣೆಯ ಹೆಸರಿನಲ್ಲಿ ಕರುವಿಗೆ ಹಾಲನ್ನು ಬಿಡದೆ ಎಲ್ಲ ಹಾಲನ್ನು ಹೀರುವ ಪ್ರಯತ್ನ ಮಾಡುವ ಹಿಲ್ಡಾ ಮತ್ತು ಕಾಳಿಂಗ ಕಡೆಗೆ ತನ್ನ ಮಗುವಿಗೆ ಹಾಲನ್ನು ಕುಡಿಸಲು ಆಗದೇ ಒದ್ದಾಡುವ ರೀತಿ ಎಂತಹವರ ಕಣ್ಣಲ್ಲೂ ನೀರು ತರಿಸುತ್ತದೆ. ಕಾಳಿಂಗ ಕಡೆಗೆ ಹೇಗೆ ತಬ್ಬಲಿಯಾಗುತ್ತಾನೆ ಎಂಬುದನ್ನು ಓದಿಯೇ ತಿಳಿಯಬೇಕು.

ಪರ್ವತದಲ್ಲಿ ಪವಾಡ

ನಾನು ಈವರೆಗೂ ಆಂಗ್ಲದಿಂದ ಕನ್ನಡಕ್ಕೆ ಅನುವಾದವಾಗಿರುವ ಪುಸ್ತಕಗಳನ್ನು ಓದಿರಲಿಲ್ಲ.ಇದಕ್ಕೆ ಕಾರಣ ಇಷ್ಟೆ.ಪುಸ್ತಕದ ನಿಜವಾದ ರುಚಿಯು ಮೂಲದಲ್ಲಿಯೇ ಇರುತ್ತದೆ ಎಂದು ನನ್ನ ನಂಬಿಕೆ . ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಪುಸ್ತಕವು ಅನುವಾದಗೊಳ್ಳುವ ಆಗ ಅದು ತನ್ನ ಶೈಲಿ ಮತ್ತು ಸ್ವಾದವನ್ನು ಕಳೆದುಕೊಳ್ಳುತ್ತದೆ ಎಂಬುದು ನನ್ನ ಅನಿಸಿಕೆಯಾಗಿತ್ತು. ಸಂಸ್ಕೃತದಿಂದ ಆಂಗ್ಲಕ್ಕೆ ಮತ್ತು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಗೊಂಡ ಪುಸ್ತಕಗಳಲ್ಲಿ ಈ ವಿದ್ಯಮಾನವು ಸಾಕಷ್ಟು ಕಂಡಿತ್ತು.ಹಾಗಾಗಿ ನಾನು ಎಂದಿಗೂ ಆಂಗ್ಲದಿಂದ ಅನುವಾದವಾಗಿರುವ ಯಾವುದೇ ಪುಸ್ತಕವನ್ನು ಓದಬಾರದೆಂದು ನಿರ್ಧರಿಸಿ ಮೂಲ ಪುಸ್ತಕಗಳನ್ನು ಓದಲು ಬಯಸುತ್ತಿದ್ದೆ.ಸಂಯುಕ್ತಾ ಪುಲಿಗಲ್ ಅವರು ಅನುವಾದಿಸಿರುವ "ಪರ್ವತದಲ್ಲಿ ಪವಾಡ" ಪುಸ್ತಕವನ್ನು ಓದಿದಮೇಲೆ ಅನುವಾದ ಸಾಹಿತ್ಯದ ಬಗೆಗಿನ ನನ್ನ ಅನಿಸಿಕೆ ಸಂಪೂರ್ಣವಾಗಿ ಬದಲಾಗಿದೆ.ಈ ಪುಸ್ತಕವನ್ನು ಸಂಯುಕ್ತ ನನಗೆ ಮೂರು ವರ್ಷದ ಹಿಂದೆ ಕೊಟ್ಟಿದ್ದರಾದರೂ ನಾನು ನನ್ನದೇ ಆದ ಕಾರಣಗಳಿಂದ ಈ ಪುಸ್ತಕವನ್ನು ಓದಲಾಗಿರಲಿಲ್ಲ. ಈ ಲಾಕ್ ಡೌನ್ ಇಂದಾಗಿ  ಹಲವಾರು ಪುಸ್ತಕಗಳನ್ನು ಓದಲು ಅವಕಾಶ ಸಿಕ್ಕಿತು . ಪರ್ವತದಲ್ಲಿ ಪವಾಡ ಪುಸ್ತಕವನ್ನು ಓದುವ ಮುಂಚೆಯೇ ನಾನು ಸಂಯುಕ್ತ ರವರ ಲ್ಯಾಪ್ ಟಾಪ್ ಪರದೆಯಾಚೆಗೆ ಎಂಬ ಪುಸ್ತಕವನ್ನು ಓದಿದೆ.ಅವರ ಸುಲಲಿತವಾದ ಬರಹದ ಶೈಲಿ ಬಹಳ ಇಷ್ಟವಾಗಿತ್ತು.ಅವರ ಸ್ವಂತ ಬರಹಗಳು ಇಷ್ಟು ಹೃದ್ಯವಾಗಿರುವಾಗ ಅವರ ಅನುವಾದಶೈಲಿ ಹೇಗಿರಬಹುದು ಎಂಬ ಕುತೂಹಲದೊಂದಿಗೆ ಈ ಪುಸ್ತಕವನ್ನು ನಾನು ಓದಲು ಪ್ರಾರಂಭಿಸಿದೆ . ನಮ್ಮ ದೇಶದಲ್ಲಿ ಆ್ಯಂಡಿಸ್ ಪರ್ವತವಿದ್ದಿದ್ದರೆ ಮತ್ತು ಕನ್ನಡಿಗನೊಬ್ಬ ಏನಾದರೂ ಆ ಪರ್ವತದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ಅವನ ಮನಸ್ಸಿನಲ್ಲಿ ಯಾವ ರೀತಿಯ ತಳಮಳಗಳು ಉಂಟಾಗುತ್ತಿದ್ದವೋ, ಅಂತೆಯೇ ಇದೆ ಸಂಯುಕ್ತಾ ರವರ ಅನುವಾದ.ಎಲ್ಲಿಯೂ ಸಹ ಇದು ಅನ್ಯದೇಶೀಯ ಪುಸ್ತಕದ ಅನುವಾದ ಎಂದು ಅನಿಸದ ಹಾಗೆ ಅವರು ಆಪ್ತವಾಗಿ ಪುಸ್ತಕವನ್ನು ಕನ್ನಡೀಕರಿಸಿದ್ದಾರೆ.ಈ ಬೃಹತ್ ಸಾಹಸಕ್ಕೆ ಅವರು ಖಂಡಿತಾ ಅಭಿನಂದನಾರ್ಹರು .

ಹಿಮಾಲಯದ ಹಿಮಪಾತಗಳಲ್ಲಿ ಕಳೆದು ಹೋದ ಮತ್ತು ಮರಣ ಹೊಂದಿದ ಎಷ್ಟೋ ಜನರ ಬಗ್ಗೆ ನಾವು ಕೇಳಿದ್ದೇವೆ, ಓದಿದ್ದೇವೆ.ಆದರೆ ದೂರದ ದಕ್ಷಿಣ ಅಮೇರಿಕದಲ್ಲಿ ,ಜಗತ್ತಿನ ಅತ್ಯಂತ ಉದ್ದನೆಯ ಪರ್ವತ ಶ್ರೇಣಿಯಾದ ಆ್ಯಂಡಿಸ್ ಶಿಖರಗಳಲ್ಲಿ ವಿಮಾನ ಅಪಘಾತದಿಂದ ಸಿಕ್ಕಿಹಾಕಿಕೊಂಡ ಅವರ ಕಥೆಯನ್ನು ನಾನಂತೂ ಕೇಳಿರಲೂ ಇಲ್ಲ ಓದಿಯೂ ಇರಲಿಲ್ಲ.ಕೈಯಲ್ಲಿ ಹಿಡಿದ ತಕ್ಷಣ ಕೆಳಗಿಡಲಾಗದಂತೆ ಓದಿಸಿಕೊಂಡು ಹೋಯಿತು ಈ ಪುಸ್ತಕ.ನ್ಯಾಂಡೋ ಪರಾಡೋ ಅವರು ಆಂಡಿಸ್ ಪರ್ವತಗಳ ಮಧ್ಯದಲ್ಲಿ ವಿಮಾನ ಅಪಘಾತದಿಂದಾಗಿ   ಸಿಕ್ಕುಹಾಕಿಕೊಂಡು ಪಟ್ಟ ಪಾಡು ಎಷ್ಟು ಕಷ್ಟಕರವಾದದ್ದು ಎಂದು ಓದುತ್ತಾ ಹೋದರೆ, ನಾವು ಪಟ್ಟ ಮತ್ತು ಪಡುತ್ತಿರುವ ಕಷ್ಟಗಳೆಲ್ಲವೂ ತೃಣಸಮಾನ ಎಂದೆನಿಸಿ ನಮ್ಮ ಬದುಕಿನ ದೃಷ್ಟಿಕೋನವೇ ಬದಲಾಗುತ್ತದೆ. ನಲವತ್ತು ದಿನದ ಗೃಹಬಂಧನ ವನ್ನೇ ದೊಡ್ಡ ವಿಷಯವನ್ನಾಗಿಸುವ ನಾವು ಎಪ್ಪತ್ತೆರಡು ದಿನಗಳ ಆ ಘೋರ ಪರದಾಟವನ್ನು ಕನಸಿನಲ್ಲಿಯೂ ಸಹ ಕಲ್ಪಿಸಿಕೊಳ್ಳಲಾರೆವು. ತಿನ್ನಲು ಏನೂ ಆಹಾರವಿಲ್ಲದೆ ಕಡೆಗೆ ಸತ್ತ ಸ್ನೇಹಿತರ ಶವಗಳನ್ನೇ ತಿನ್ನುವ ಪಾಡು ಇನ್ಯಾರಿಗೂ ಬಾರದಿರಲಿ ಎಂದೆನಿಸಿಬಿಡುತ್ತದೆ . ಬದುಕುಳಿಯಲು ಇರುವ ಛಲ ಮತ್ತು ಬದುಕಲು ಪಡುವ ಕಷ್ಟ ಎರಡೂ ನಮ್ಮ ಕಣ್ತೆರೆಸುತ್ತವೆ. ಜೀವನದ ಬಗೆಗಿನ ನಮ್ಮ ವ್ಯಾಖ್ಯಾನವೇ ಬದಲಾಗಿಬಿಡುತ್ತದೆ.ದೇವರ ಬಗೆಗಿನ ನಂಬಿಕೆ ಮತ್ತು ದೇವರೆಂದರೆ ಯಾರು ? ಏನು ?ಎಂಬ ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿದರೂ ಉತ್ತರಗಳಿಗೆ ಹಲವಾರು ದಾರಿಗಳು ತೆಗೆದುಕೊಂಡಂತೆ ಎನಿಸುತ್ತದೆ . ಕೆಲವೆಡೆ ಸ್ವಲ್ಪ ಸಿನಿಮೀಯ ಅನಿಸಿದರೂ ಎಲ್ಲಿಯೂ ಸಹ ನಾವು ಆಸಕ್ತಿ ಕಳೆದು ಕೊಳ್ಳದಂತೆ ಕಥೆಯನ್ನು ನಿರೂಪಿಸುವ ಕಥೆಗಾರ ಯಶಸ್ವಿಯಾಗಿದ್ದಾರೆ ಮತ್ತು ಅದನ್ನುಅಷ್ಟೇ ಭಾವಪೂರ್ಣವಾಗಿ ,ಆಪ್ತವಾಗಿ , ಅಷ್ಟೇ ಸಂವೇದನಾ ಪೂರ್ಣವಾಗಿ ಅನುವಾದಿಸುವಲ್ಲಿ ಸಂಯುಕ್ತಾ ರವರು ಸಹ ಯಶಸ್ವಿಯಾಗಿದ್ದಾರೆ . ಈ ಪುಸ್ತಕ ಹಲವಾರು ಜನರ ಬಾಳನ್ನು ಬೆಳಕಾಗಿಸಬಲ್ಲುದು ಎಂಬುದು ಮೂಲ ಬರಹಗಾರರ ಆಶಯವಾಗಿತ್ತು. ಕನ್ನಡಕ್ಕೆ ಅನುವಾದಗೊಂಡ ಈ ಪುಸ್ತಕವು ಕನ್ನಡಿಗರ ಬಾಳನ್ನು ಸಹ ಬೆಳಗಿಸಬಲ್ಲುದು ಎಂಬುದನ್ನು ಸಂಯುಕ್ತಾ ಅವರ ಅನುವಾದ ಸಾಧಿಸಬಲ್ಲದು ಎಂಬ ಆಶಯ ನಮಗಿದೆ .ಕನ್ನಡಕ್ಕೆ ನನಿಜವಾಗಿಯೂ ಇಂತಹ ಅನುವಾದಕರ ಅವಶ್ಯಕತೆ ಇದೆ . ಕನ್ನಡಕ್ಕೆ ಇಂತಹ ಪುಸ್ತಕಗಳ ಅವಶ್ಯಕತೆ ಬಹಳ ಇದೆ. ಇಂತಹ ಅದ್ಭುತವಾದ ಪುಸ್ತಕವನ್ನು ಕೊಟ್ಟಂತಹ ಸಂಯುಕ್ತಾ ರವರಿಗೆ ಮತ್ತೊಮ್ಮೆ ಧನ್ಯವಾದಗಳು.

Wednesday, August 15, 2018

ನಿರ್ಧಾರ

ಪುಸ್ತಕದ ಹೆಸರು: ನಿರ್ಧಾರ
ತೆಲುಗು ಮೂಲ: ಯಂಡಮೂರಿ ವೀರೇಂದ್ರನಾಥ್
ಕನ್ನಡಕ್ಕೆ:ರಾಜಾ ಚೆಂಡೂರ್

ಒಂದೆಳೆಯ ಕಥೆಯು ಯಂಡಮೂರಿ ವೀರೇಂದ್ರನಾಥ್ ಅವರ ಕಲ್ಪನಾ ಶಕ್ತಿಯಲ್ಲಿ ಒಂದು ಉತ್ತಮ ಕಾದಂಬರಿಯಾಗಬಲ್ಲದು ಎಂಬುದಕ್ಕೆ ಈ ಕಾದಂಬರಿ ಸಾಕ್ಷಿ. ಕಿಡ್ನಿ transplant ಕ್ರಿಯೆ ಯ ಹಿಂದೆ ಏನೆಲ್ಲಾ ನಡೆಯುತ್ತದೆ, ರೋಗಿಯ ಮನಸ್ಥಿತಿ, ರೋಗಿಯ ಮನೆಯವರ ಮನಸ್ಥಿತಿ ಹೇಗಿರುತ್ತದೆ, ಡಾಕ್ಟರ್ ಗಳ ನಡವಳಿಕೆ, ಸಹಾಯ ಮಾಡುವವರ ಹಿಂದಿನ ಧ್ಯೇಯೋದ್ದೇಶಗಳು,  ಇವೆಲ್ಲವನ್ನು ಪರಿಚಯಿಸುವ ವಿಶೇಷ ಕಾದಂಬರಿ ಇದು. ಮಾರಣಾಂತಿಕ ರೋಗವನ್ನು ತಣ್ಣಗೆ accept  ಮಾಡಿಕೊಂಡು ಸಾಯುವ ಕಡೆಯ ಕ್ಷಣದ ವರೆಗೂ ಬದುಕಿನಲ್ಲಿ  ಸಕಾರಾತ್ಮಕ ಚಿಂತೆ ಮಾಡುವ ವಿಶೇಷ ಮನುಷ್ಯರು...ಅಬ್ಬಬ್ಬಾ...ಯಂಡಮೂರಿ ತಮ್ಮ ಕಾದಂಬರಿಯ ಪಾತ್ರ ರಚನೆಯಲ್ಲಿ ಪ್ರತಿಬಾರಿಯೂ ವಿವಿಧತೆ ಮೆರೆದಿದ್ದಾರೆ.

ಇಲ್ಲೂ ಸಹ ಹೆಣ್ಣು ಮಗಳಿಗೆ ಆದ ಅನ್ಯಾಯವೇ ಪ್ರಧಾನ. ಇಲ್ಲೂ ಒಂದಿಬ್ಬರು ಹೆಣ್ಣುಮಕ್ಕಳು ಬಹಳ ಜಾಣೆಯರು.

ಸುಮದ್ಯುತಿ ಎಂಬ ವಿಶೇಷ ಹೆಸರುಳ್ಳ ಕನ್ಯೆಯ ದಾರುಣ ಜೀವನ ಕಥೆಯಿದು. ಅವಳ ಕ್ಲಾಸ್ಮೇಟ್ ಒಬ್ಬ ಒಂದು ದಿನ ಅಚಾನಕ್ಕಾಗಿ, casual ಆಗಿ ಅವಳ ಮನೆಗೆ ಬರುತ್ತಾನೆ. ಅದೃಷ್ಟವೋ ದುರದೃಷ್ಟವೋ, ಅಂದು ಅವಳ ವಧುಪರೀಕ್ಷೆ. ವರನಾಗುವವನು ಒಂದು ಅರೆಘಳಿಗೆ ಇವನನ್ನು ನೋಡುತ್ತಾನೆ. ಅಲ್ಲಿಂದ ಇವರ ಮೂರೂ ಜನರ ಜೀವನ ಮಹತ್ವದ ತಿರುವು ಪಡೆಯುತ್ತದೆ. ಕ್ಲಾಸ್ಮೇಟ್ ಈ ಕಥೆ ನಿರೂಪಿಸುವ ರೀತಿಯಲ್ಲಿ ಕಥೆ ಸಾಗುತ್ತದೆ.  ಇವರ ಜೀವನದಲ್ಲಿ ಆಗುವ ಘಟನೆಗಳು ಅಸಾಮಾನ್ಯ, ಆಕಸ್ಮಿಕ. ನಾನು ಕಥೆ ಎಳೆಯನ್ನು ಬಿಟ್ಟುಕೊಡಲು ಇಚ್ಛಿಸದೇ ಇಷ್ಟೇ ವಿವರಣೆ ನೀಡುತ್ತಿದ್ದೇನೆ. ಯಂಡಮೂರಿಯವರು ಕಥಾ ನಿರೂಪಣೆಯಲ್ಲಿ ನಿಜವಾಗಿಯೂ ಒಂದು ಅದ್ಭುತ ಓಟದ ಶೈಲಿಯನ್ನು ತಂದಿದ್ದಾರೆ.  ಒಂದೇ ಗುಕ್ಕಿನಲ್ಲಿ ಈ ಕಾದಂಬರಿಯನ್ನು ಹಗಲು ರಾತ್ರಿ ಎನ್ನದೆ ಓದಿ ಮುಗಿಸಿದ್ದೇನೆ.

ಈ ಕಾದಂಬರಿಯಲ್ಲಿ ನನ್ನನ್ನು ಬಹಳವಾಗಿ ಕಾಡುವ ಪಾತ್ರ ಜಾನ್ ಡೇವಿಡ್ ನದ್ದು. ಜೀವನದಲ್ಲಿ ಕೆಲವು ಮಿತ್ರರು ಮಾತ್ರ ನಮ್ಮ ಸ್ಪೂರ್ತಿಯ ಸೆಲೆಯಾಗಿ, ಸದಾ ಬೆಂಗಾವಲಾಗಿ, ಊರುಗೋಲಾಗಿ, ದಾರಿದೀಪವಾಗಿ ನಿಲ್ಲಬಲ್ಲರು. ಕಥಾನಾಯಕನಿಗೆ ಜಾನ್ ಡೇವಿಡ್ ಇವೆಲ್ಲವೂ ಆಗುತ್ತಾನೆ. ನಿಜ ಜೀವನದಲ್ಲಿ ಇಂಥ ಒಬ್ಬ ಮಿತ್ರನ ಇರುವನ್ನು ನಮ್ಮ ಮನಸ್ಸು ಬಯಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಸತ್ಯವೇನಂದರೆ, ಆ ತರಹದ ನಿಃಸ್ವಾರ್ಥ ಮಿತ್ರರು ಈ ಜಗತ್ತಲ್ಲಂತೂ ಖಂಡಿತಾ ದೊರೆಯುವುದಿಲ್ಲ. ಕಲ್ಪನೆಯ ಜಗತ್ತಲ್ಲೇ ಅದು ಸಾಧ್ಯವೆಂದು ನಾವು ಮನಸ್ಸು ಗಟ್ಟಿಮಾಡಿಕೊಳ್ಳಬೇಕು.

ಇಲ್ಲಿನ ಕೆಲವು ಮಾತುಗಳು ಮನಸ್ಸಿಗೆ ಬಹಳ ಸಾಂತ್ವನ ನೀಡಿ, ಸಮಸ್ಯೆಯನ್ನು ಯೋಚಿಸುವ ನಮ್ಮ ರೀತಿಯನ್ನೇ ಬದಲಾಯಿಸಬಲ್ಲ ಶಕ್ತಿ ಹೊಂದಿದೆ. ಹಾಗಾಗಿ ಈ ಪುಸ್ತಕ ಸಂಗ್ರಹಯೋಗ್ಯ. 

Tuesday, July 24, 2018

ದುಡ್ಡು ದುಡ್ಡು

ಪುಸ್ತಕದ ಹೆಸರು: ದುಡ್ಡು ದುಡ್ಡು
ಲೇಖಕರು: ಮೂಲ: ಯಂಡಮೂರಿ ವೀರೇಂದ್ರನಾಥ್
ಅನುವಾದ : ವಂಶಿ

ಈ ಪುಸ್ತಕ ಓದಿದ ತಕ್ಷಣ ನಾನು "ಅದ್ಭುತ " ಎಂದು ಉದ್ಗರಿಸಿದೆ. ಯಂಡಮೂರಿಯವರ ಪಾತ್ರ  ಸೃಷ್ಟಿ, ಕಥನ ಶೈಲಿ, ಕಾದಂಬರಿಗೆ ಅವರ ವಸ್ತುವಿನ ಆಯ್ಕೆ, ಕಾದಂಬರಿಗೆ ಬೇಕಾದ ವಿಷಯಗಳ ಬಗ್ಗೆ ಸಂಶೋಧನೆ, ಆಳ, ಅರಿವು, ಓದುಗನ ಮನಸ್ಥಿತಿ ಹೇಗಿರಬಹುದು, ಹೇಗೆ ಆಗಬಹುದು, ಅವರ ಕಾದಂಬರಿ ಏನು ಸಂದೇಶ ದಾಟಿಸಬೇಕು, ಇವೆಲ್ಲದರ ಬಗ್ಗೆ ಅವರು ವಹಿಸಿರುವ ಆಸ್ಥೆ ಎಚ್ಚರಿಕೆಗಳೇ ಅವರನ್ನು ನಂಬರ್ ವನ್ ಕಾದಂಬರಿಕಾರರನ್ನಾಗಿಸಿದೆ ಅನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

what a book ! What a book ! What a book !! ನಿಜಕ್ಕೂ ಪ್ರತಿಪುಟದಲ್ಲೂ ಕುತೂಹಲ ಕೆರಳಿಸಿದ ಪುಸ್ತಕ ಇದು. ಈ ಕಾದಂಬರಿಯ ಮುಖ್ಯ ಪಾತ್ರದ ಹೆಸರು ಗಾಂಧಿ. ಗಾಂಧಿ ಭಾರತದ ಕರೆನ್ಸಿಯ ಪ್ರತಿ ನೋಟಿನ ಮೇಲೂ ಇದ್ದಾನೆ. ಈ ಗಾಂಧಿ ಎಂಬ ಹೆಸರನ್ನ ದುಡ್ಡೇ ಇಲ್ಲದ ನಿರ್ಗತಿಕನಾದ ಕಥಾನಾಯಕನ ಹೆಸರಾಗಿ ಅವರು ಆರಿಸಿದ್ದು ಬಹಳ ಮಾರ್ಮಿಕವಾಗಿದೆ. ಈ ಗಾಂಧಿ ದುಡ್ಡು ಮಾಡುವ  ಒಂದ್ಪು ಅಪೂರ್ವ ಪಂದ್ಯದ ರೋಚಕ ಕಥೆ ಈ ಕಾದಂಬರಿ.

ಒಂದೇ ಒಂದು ಸಾಮ್ಯ ಕಾಣಿಸಿತು, ಕಪ್ಪಂಚು ಬಿಳಿಸೀರೆ ಮತ್ತು ಈ ಪುಸ್ತಕದಲ್ಲಿ. ಎರಡರಲ್ಲೂ  ಒಂದು ಹೆಣ್ಣು  ಪಾತ್ರ ಕಾಣದಂತೆ ಕೆಲಸ ಮಾಡುತ್ತಿರುತ್ತದೆ, ಮತ್ತು ಅದು ಕಥಾನಾಯಕನಿಗಿಂತ ಹೆಚ್ಚು ಬುದ್ಧಿವಂತ ಹೆಣ್ಣಾಗಿರುತ್ತದೆ. ಮತ್ತು, ಅದೇ ಹೆಣ್ಣಿಗೆ ಈ ನಾಯಕನಿಂದ ಅಪಾರವಾದ ಅನ್ಯಾಯ ಆಗಿರುತ್ತದೆ. ಅದು ಬಿಟ್ಟರೆ ಎರಡೂ ಕಾದಂಬರಿಯ ಕಥಾ ಹಂದರ ಸಂಪೂರ್ಣ ಬೇರೆ.

ಗಾಂಧಿಯು ದುಡ್ಡು ಸಂಪಾದಿಸಲು ಮಾಡುವ ಪ್ಲಾನುಗಳಲ್ಲಿ ಒಂದನ್ನಾದರೂ ಮಾಡಿಯೇ ನೋಡಬೇಕು ಅಂತ ಒಮ್ಮೆ ಆಸೆಯಾಯಿತಾದರೂ, ಇದು ಕಾದಂಬರಿಯಲ್ಲ, ಜೀವನ ಅಂತ ನೆನಪಾಗಿ ಸುಮ್ಮನಾಗಬೇಕಾಯಿತು. ಮಿಕ್ಕೆಲ್ಲದನ್ನು ಹೇಳಿ ಕಾದಂಬರಿಯ ಓದಿನ ಸುಖವನ್ನು ಹಾಳು ಮಾಡಲಾರೆ. ಖಂಡಿತಾ ಓದಬೇಕಾದ ಪುಸ್ತಕ, ಮತ್ತೂ ಮತ್ತೂ ಓದಿಸಿಕೊಳ್ಳುವ ಪುಸ್ತಕ.

Monday, July 16, 2018

ಶಿಖರಸೂರ್ಯ

ಪುಸ್ತಕದ ಹೆಸರು: ಶಿಖರಸೂರ್ಯ
ಲೇಖಕರು: ಚಂದ್ರಶೇಖರ ಕಂಬಾರ 
ಪ್ರಕಾಶಕರು: ಅಂಕಿತ ಪುಸ್ತಕ 

 " ಗಣಪತಿ ಮದುವೆಗೆ  ನೂರೆಂಟು ವಿಘ್ನ" . ಮುಂದೆ ನಾನು ಹುಟ್ಟಿ ಈ ಗಾದೆಯನ್ನು ಒಂದು ಕೋಟಿ  ಸರ್ತಿ ಬಳಸುತ್ತೇನೆ ಎಂದು ತಿಳಿದೇ ಹಿರಿಯರು ಈ ಗಾದೆಯನ್ನು ಬಹಳ ಹಿಂದೆಯೇ  ಮಾಡಿಟ್ಟು ಹೋಗಿದ್ದಾರೆ ಅಂತ ಅನಿಸಿದೆ. ಈ ಪುಸ್ತಕದ ಓದಿನ ವಿಷಯದಲ್ಲಿ ಈ ಗಾದೆ ನೂರು ಪ್ರತಿಶತ ಸತ್ಯ. 
ಮೊದಲ ನೂರಾ ಮೂರು  ವಿಘ್ನಗಳು , ಕಾದಂಬರಿ ತರಿಸಿದ ತಕ್ಷಣ ನಾನು ಓಡಲಾರದೆ ಮೂರು  ವರ್ಷ ಸುಮ್ಮನೆ ಇಟ್ಟದ್ದು. 
 ನೂರಾನಾಲ್ಕು: ಓದುವಾಗ ಈ ಕಾದಂಬರಿ ಗೆ ಮೊದಲು ಚಕೋರಿ ಓದಬೇಕು ಎಂದು ಗೊತ್ತಾಗಿದ್ದು. 
ನೂರಾ ಐದು : ಚಕೋರಿ ಪುಸ್ತಕ ಕೈಗೆ ಸಿಗಲು ಒಂದು ವಾರ ತಡವಾಗಿದ್ದು. 
ನೂರಾ ಆರು : ಚಕೋರಿ ಮುಗಿಸಿ ಶಿಖರ ಸೂರ್ಯ ಪ್ರಾರಂಭಿಸಿ ಅರ್ಧ ಮುಗಿಸುವ ಹೊತ್ತಿಗೆ ಹಳಗನ್ನಡ ಎಕ್ಸಾಂ ಅನೌನ್ಸ್ ಆಗಿದ್ದು. 
ನೂರಾ ಏಳು: ಹಳಗನ್ನಡ ಪರೀಕ್ಷೆ ಮುಗಿಯುವ ಹೊತ್ತಿಗೆ ನನಗೆ ಕಪ್ಪಂಚು ಬಿಳಿಸೀರೆ ಕಾದಂಬರಿ ಸಿಕ್ಕಿದ್ದು !
ನೂರಾ ಎಂಟು: ಕಪ್ಪಂಚು ಬಿಳಿಸೀರೆ ಮುಗಿಸುವ ಹೊತ್ತಿಗೆ ಮಧುವನ ಸಿಕ್ಕಿದ್ದು. 

ಹೀಗೆ ಹೇಗೋ ಆಗಿ ಕಡೆಗೆ ಒಂದು ದಿನ  ದೃಢ ನಿಶ್ಚಯ ಮಾಡಿ, ಕಾದಂಬರಿ ಹಿಡಿದು ಕುಳಿತು ಒಂದೇ ಗುಕ್ಕಿಗೆ ಓದಿ ಮುಗಿಸಿದ್ದು. ಕಂಬಾರರ ನಾಲ್ಕು ಕಾದಂಬರಿಗಳನ್ನು ಸತತವಾಗಿ ಓದಲಾರಂಭಿಸಿದ ಮೇಲೆ ಅವರ ಬರಹ ಶೈಲಿ ಮತ್ತು ಯೋಚನಾ ಲಹರಿಗಳು ತಕ್ಕಮಟ್ಟಿಗೆ ಅರ್ಥವಾಗತೊಡಗಿತು. ಶಿಖರಸೂರ್ಯದಲ್ಲಿ ಅವರ ಕಥನ ಶಕ್ತಿಯ ವಿಶ್ವರೂಪ ದರ್ಶನ ಆಯಿತು. 

ಕಾದಂಬರಿ ಸಂಪೂರ್ಣವಾಗಿ ಕಾಲ್ಪನಿಕವಾದರೂ, ಅದರ ಮೂಲ ಜಾನಪದದಲ್ಲಿ ಜೀವಂತವಾಗಿರುವ ನಾಗಾರ್ಜುನನ ಕಥೆ.
ಶಿಖರಸೂರ್ಯ  ಎಂಬುದು ಒಂದು ಕಾಲ್ಪನಿಕ ಪಾತ್ರ. ಚಕೋರಿಯಲ್ಲಿ ಚಿನ್ನಮುತ್ತ ಎಂಬ ಪಾತ್ರದ ಮುಂದುವರೆದ ಭಾಗವಾಗಿ ಚಿನ್ನಮುತ್ತ ಶಿಖರಸೂರ್ಯನಾಗುತ್ತಾನೆ. ಚಿನ್ನಮುತ್ತ ಶಿಖರಸೂರ್ಯನಾಗಲು ತೆಗೆದುಕೊಳ್ಳುವ ಸಮಯ ಅತ್ಯಲ್ಪ ಶ್ರಮ ಬಹಳ. ಅನೇಕ ಕುಯುಕ್ತಿಗಳನ್ನು ಬಳಸಿ ತಾನು ವಿಷವಿದ್ಯೆಯನ್ನು ಕಲಿಯುತ್ತಾನೆ. . ಶಿಖರ ಸೂರ್ಯನಾದ ಮೇಲೆ ಅವನ ಹೆಸರಲ್ಲಷ್ಟೇ ಅಲ್ಲ, ವ್ಯಕ್ತಿತ್ವದಲ್ಲೂ ಬಹಳ ಬದಲಾವಣೆಗಳಾಗುತ್ತವೆ.  ಸೇಡು, ಹಠ ಮತ್ತು ಮಹತ್ವಾಕಾಂಕ್ಷೆ ಎನ್ನುವುದು ಮನುಷ್ಯನನ್ನು ಏನೆಲ್ಲಾ ಮಾಡಬಲ್ಲದು, ಮತ್ತು ಏನೇನೆಲ್ಲಾ ಮಾಡಿಸಬಲ್ಲದು ಎಂಬುದಕ್ಕೆ ಕನಕಪುರಿ ಸಾಮ್ರಾಜ್ಯ ಮತ್ತು ಶಿಖರ ಸೂರ್ಯ ಸಾಕ್ಷಿಯಾದರೆ, ಒಳ್ಳೆತನ ಮನುಷ್ಯನನ್ನು ಹೇಗೆ ಮುನ್ನೆಡೆಸುತ್ತದೆ ಎನ್ನುವುದಕ್ಕೆ ಶಿವಾಪುರ, ಶಿವಪಾದ, ನಿನ್ನಡಿ,ಮುದ್ದುಗೌರಿ ಮತ್ತು ರವಿಕೀರ್ತಿ ಸಾಕ್ಷಿಯಾಗುತ್ತಾರೆ 

ಈ ಕಾದಂಬರಿಯಲ್ಲಿ ನಮ್ಮನ್ನು ಬಹಳವಾಗಿ ಕಾಡುವ ಪಾತ್ರ ಶಿವಪಾದ , ಚಂಡೀದಾಸ ಮತ್ತು ಮುದ್ದುಗೌರಿಯದು. ವಿದ್ಯುಲ್ಲತೆ ಕೂಡಾ ಮನಸ್ಸನ್ನು ಬಹಳಕಾಲ ಆವರಿಸಿರುತ್ತಾಳೆ. ಮಹಾರಾಣಿಯ ಪಾತ್ರ ಸ್ವಲ್ಪ ಎಳೆದಂತೆ ಅನಿಸುತ್ತದೆ. ಶಿಖರ ಸೂರ್ಯ ಮತ್ತು ಅವಳ ಭೇಟಿಯ ಆ ಪ್ರಸಂಗದ ಅಗತ್ಯವಿರಲಿಲ್ಲ ಎಂದು ನನ್ನ ಅಭಿಪ್ರಾಯ. ಛಾಯಾದೇವಿ ಮತ್ತು ಚಿಕ್ಕಮ್ಮಣ್ಣಿಯರ ಅಸಹಾಯಕತೆ ಸ್ವಲ್ಪ ಜಿಗುಪ್ಸೆ ತರಿಸುತ್ತದೆ. 

ಕಥೆಯ ಓಘ ಪೂರ್ವಾರ್ಧದಲ್ಲಿ ನಮ್ಮನ್ನು ಎಡೆಬಿಡದಂತೆ ಓದಿಸಿಕೊಂಡು ಹೋಗುತ್ತದೆ, ಉತ್ತರಾರ್ಧ ಸ್ವಲ್ಪ ಹಿಡಿ ತಪ್ಪಿದೆ. ಇದು ಲೇಖಕರಿಗೂ ಪ್ರಾಯಶ: ಅರಿವಾಗಿ ಅಂತ್ಯದಲ್ಲಿ ಬಿಗಿಯನ್ನು ಮತ್ತೆ ತಂದಿದ್ದಾರೆ. ಕಾದಂಬರಿಯ ಅಂತ್ಯ ಸ್ವಲ್ಪ predictable ಆದರೂ ಅದನ್ನು ಹೇಳಿರುವ ರೀತಿ ವಿಶೇಷವಾಗಿದೆ. ಕಾಲ್ಪನಿಕ ಪಾತ್ರದ ಅಂತ್ಯವನ್ನು ಓದುಗರ ಕಲ್ಪನೆಗೆ ಬಿಟ್ಟದ್ದು ಸ್ವಲ್ಪ ಇಷ್ಟ ಆಯಿತು ನನಗೆ.

ಇನ್ನು ಕಂಬಾರರ ಕಥನ ಶೈಲಿಯ ಬಗ್ಗೆ ನಾನು ಏನು ತಿಳಿದೆ  ಅನ್ನುವುದರ ಬಗ್ಗೆ ಸ್ವಲ್ಪ ಬರೆಯಬೇಕು. ಇದು ನಾನು ಓದುತ್ತಿರುವ ಕಂಬಾರರ ಮೂರನೆಯ ಕಾದಂಬರಿ. ಎಲ್ಲಾ ಕಾದಂಬರಿಗಳ ಮೂಲಸ್ಥಾನ ಶಿವಾಪುರ. ಧರ್ಮದ ಸೆಲೆ ಶಿವಪಾದ. ಎಲ್ಲವು ಅವನ ಕರುಣೆ. ಮಾತೃ ಸಂಸ್ಕೃತಿ ಪ್ರಧಾನ ವ್ಯವಸ್ಥೆ ವಿಜೃಂಭಿಸುತ್ತದೆ. ಪ್ರಕೃತಿಗೆ ಮಾನವ ಅಭಿವೃದ್ಧಿಯ ಹೆಸರಿನಲ್ಲಿ ನೀಡುತ್ತಿರುವ ಹಿಂಸೆಯನ್ನು ಕಂಬಾರರು ಬಹಳ ವಿಶಿಷ್ಟ ರೀತಿಯಲ್ಲಿ ಹೇಳುತ್ತಾ ಸಾಗುತ್ತಾರೆ. ಇದು ಒಂಥರಾ ಆಧುನಿಕ ಸಮಸ್ಯೆಯನ್ನು ಫೇರಿಟೇಲ್ ರೀತಿಯಲ್ಲಿ ಹೇಳಿದ ಹಾಗಿರುತ್ತದೆ. ಶಿವನ ಡಂಗುರ ಕಾದಂಬರಿಯಲ್ಲಿ  globalisation ವಸ್ತುವಾದರೆ, ಚಕೋರಿಯಲ್ಲಿ ಸಂಗೀತಗಾರನ fantasy ಅವನಿಗೆ ಹೇಗೆ ಮಾರಕವಾಗುತ್ತದೆ ಎಂಬುದರ ಚಿತ್ರಣವಿದೆ. ಶಿಖರಸೂರ್ಯ alchemist ಒಬ್ಬನ ಕಥೆ. ಹಾಗಾಗಿ, ಕಂಬಾರರ ಕಥಾ canvas ಬೇರೆಯಾದರೂ ಪಾತ್ರಗಳು ಸರಿಸುಮಾರು ಒಂದೇ. (ನಾನು ಓದಿರುವ ಮೂರೂ ಕಾದಂಬರಿಗಳ ಬಗ್ಗೆ ಹೇಳುತ್ತಿರುವುದು), ಶಿಖರ ಸೂರ್ಯ ಕಾದಂಬರಿಯ ಮುನ್ನುಡಿ ನನಗೆ ಒಂದು ಪದವು ಅರ್ಥವಾಗಿರಲಿಲ್ಲ. ಕಾದಂಬರಿ ಪೂರ್ತಿ ಓದಿದ ಮೇಲೆ ಮುನ್ನುಡಿಯ ಮೊದಲ ಪುಟ ಅರ್ಥವಾಗಿದೆ ಅಷ್ಟೇ.
ಮೂರೂ  ಕಾದಂಬರಿಗಳಲ್ಲಿ ನನಗೆ ಚಕೋರಿ  ಹೆಚ್ಚು ಇಷ್ಟವಾಯಿತು.


   

Wednesday, July 11, 2018

ಸದಾನಂದ ಮತ್ತು ಮಧುವನ

ಪುಸ್ತಕಗಳ ಹೆಸರು: ಸದಾನಂದ ಮತ್ತು ಮಧುವನ

ಲೇಖಕರು: ಎಮ್.ಕೆ.ಇಂದಿರಾ


Sequel ಗಳಾಗಿ ಬರುವ ಪುಸ್ತಗಳ ವಿಮರ್ಶೆಯನ್ನು ಒಟ್ಟಿಗೆ ಮಾಡಿದರೆ ಚೆನ್ನ ಎಂದು ಅನಿಸಿ ಈ ವಿಮರ್ಶೆ ಬರೆಯುತ್ತಿದ್ದೇನೆ.
ಸದಾನಂದ ನಾನು ಓದಿದ ಮೊಟ್ಟ ಮೊದಲ ಸಾಮಾಜಿಕ ಕಾದಂಬರಿ. ಅಲ್ಲಿಯವರೆಗೂ  science fiction ಮತ್ತು  classic , ಈ ಎರಡೇ  genre ಗಳನ್ನು ಓದಿ ಅಭ್ಯಾಸವಾಗಿದ್ದ ನನಗೆ ಎಮ್.ಕೆ. ಇಂದಿರಾ ರವರ ಸದಾನಂದ ಹೊಸ ಲೋಕವನ್ನೇ ತೆರೆಯಿತು. ನಮ್ಮ ಈ ಹೊತ್ತಿಗೆ ಬಳಗ ಈ ಕಾವ್ಯವನ್ನು ಚರ್ಚೆ ಗೆ ಎತ್ತಿಕೊಂಡಾಗ ಬಹಳ ಉಲ್ಲಾಸ ಉತ್ಸಾಹಗಳಿಂದ ಪುಸ್ತಕವನ್ನು ತರಿಸಿಕೊಂಡು ಓದಿದ್ದೆ. ಆದರೆ ಕಾರಣಾಂತರಗಳಿಂದ ಆ ಚರ್ಚೆಗೆ ಹೋಗಲಾಗಿರಲಿಲ್ಲ ಮತ್ತು  ಪುಸ್ತಕದ ಬಗ್ಗೆ ಬ್ಲಾಗಲ್ಲಿ ಏನೂ ಬರೆಯಲೂ ಸಹ ಆಗಿರಲಿಲ್ಲ.  ಮೊನ್ನೆ ನಮ್ಮ ಇನ್ನೊಂದು ಪುಸ್ತಕ ಹಂಚಿಕೆಯ ಗುಂಪಾದ "ಪುಸ್ತಕದ ಹುಳುಗಳು"  ಗುಂಪಿನಲ್ಲಿ ತಿಂಗಳ ಪುಸ್ತಕಗಳ ವಿನಿಮಯದ ಸಮಯದಲ್ಲಿ ಮಧುವನ ಪುಸ್ತಕ ದೊರೆಯಿತು. ಇದು ಸದಾನಂದ ಕಾದಂಬರಿಯ ಮುಂದುವರೆದ ಭಾಗ ಎಂದು ಗೊತ್ತಾದಾಗ ಬಹಳ ಖುಷಿಪಟ್ಟು ತಂದು ಓದಿದೆ. ಹಾಗಾಗಿ ಎರಡು ಪುಸ್ತಕಗಳ ವಿಮರ್ಶೆ ಒಟ್ಟಿಗೆ ಬರೆಯಲು ಇದು ಎರಡನೆಯ ಕಾರಣ.

ಸದಾನಂದ:

ಆಗಿನ ಕಾಲಕ್ಕೆ ವಿಧವಾ ವಿವಾಹ ಎಷ್ಟು ಕಷ್ಟ, ಅಪಘಾತದಿಂದ ಹೆಣ್ಣೊಬ್ಬಳು ಅಂಗವಿಕಲೆಯಾದರೆ ಅವಳ ಜೀವನದ ಸ್ಥಿತಿ ಗತಿ ಏನು ಎಂಬುದನ್ನು ಎತ್ತಿ ತೋರಿಸಲಿಕ್ಕೆ , ಶಾಸ್ತ್ರಕ್ಕಿಂತ ಮನಸ್ಸುಗಳ ಮಿಲನ ಮುಖ್ಯ ಎಂದು ಆಗಿನ ಕಾಲದ ಜನಕ್ಕೆ ಅರಿವು ಮೂಡಿಸಲೆಂದೇ ಈ ಕಾದಂಬರಿಯನ್ನು ಲೇಖಕಿ ರಚಿಸಿದ್ದಾರೆ ಎನ್ನಬಹುದು. ಕಮಲ, ಗೌರಿ, ರಾಜು, ಮೂರ್ತಿ, ರಮಾನಂದ, ಮುಕ್ತಾ, ಜಾನಕಿ, ಎಂಕಟಮ್ಮ, ದುಂಡುಮಲ್ಲಿಗೆ ಎಸ್ಟೇಟು, ಚಿಕ್ಕಮಗಳೂರಿನ ಕಾಫಿ ತೋಟ...ಆಹಾ, ಮಲೆನಾಡಿನ ಆ ವರ್ಣನೆ ಅದ್ಭುತ. ಮೂರ್ತಿ ಮತ್ತು ಗೌರಿಯ ಸುತ್ತ ಆರಂಭವಾಗುವ ಈ ಕಥೆ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳೂತ್ತಾ ಹೋಗುತ್ತದೆ. ರಾಜುವಿನ ಪಾತ್ರ ಇಲ್ಲಿ ನನಗಂತೂ ಬಹಳ ಮೆಚ್ಚುಗೆಯಾದ ಪಾತ್ರ. ಸದಾಕಾಲ ಮನೆಯ ಮತ್ತು ತೋಟದ ಕೆಲಸ ಕಾರ್ಯಗಳನ್ನೂ ಗಮನಿಸಿಕೊಳ್ಳುತ್ತಾ, ತನ್ನ ಅಪ್ಪನಿಗೂ ಆಸರೆಯಾಗಿ ನಿಂತು, ಹಿರಿಯ ಮಗ ಮೂರ್ತಿ ಕೊಟ್ಟ ಪೆಟ್ಟನ್ನು ಚೇತರಿಸಿಕೊಳ್ಳಲಾಗದೇ ತತ್ತರಿಸಿದಾಗ ಮನೆಯ ಊರುಗೋಲಾಗಿ ನಿಂತು, ತನ್ನ ಜವಾಬ್ದಾರಿಗಳನ್ನು ನಿರ್ವಹಿಸಿದ ರೀತಿ, ತನ್ನ ವಿಧವೆ ಅಕ್ಕ ಕಮಲ ಗೆ ಲೈಬ್ರರಿಯಿಂದ ಸದಾನಂದರ ಕಾದಂಬರಿಗಳನ್ನು ಓದಲು ತಂದುಕೊಟ್ಟು, ತಾನೂ ಪುಸ್ತಕಗಳನ್ನು ಓದಿ ಅವರ ಪುಸ್ತಕಗಳಿಂದ ಪ್ರಭಾವಿತನಾಗಿ, ಕಡೆಗೆ ಅವರನ್ನು ಭೇಟಿ ಮಾಡಿ, ಸ್ನೇಹ ಗಳಿಸಿ...ಇನ್ನು ಮುಂದು ಹೇಳಿದರೆ ಕಾದಂಬರಿಯ ಕಥೆಯನ್ನೇ ಬಿಟ್ಟುಕೊಟ್ಟಂಟಾದೀತು. ಒಟ್ಟಿನಲ್ಲಿ, ಮೊದಲ ಕಾದಂಬರಿಯಲ್ಲಿ ರಾಜು-ಗೌರಿಯರ ಪಾತ್ರಕ್ಕೆ ಮೇಲುಗೈ. 

ಕಾದಂಬರಿಯ ಬಹುಪಾಲು  ಸಂಭಾಷಣೆಯಾಗಿ ಸಾಗುವುದು  ಇಲ್ಲಿ ಗಮನಾರ್ಹವಾದ ಅಂಶ . ಲೇಖಕಿ  ಹೇಳಬೇಕಾಗಿರುವುದೆಲ್ಲವನ್ನೂ ಪಾತ್ರಗಳ ನಡೆ-ನುಡಿಗಳ ಮೂಲಕ ಹೇಳಿಸಿರುವುದು ಈ ಕಾದಂಬರಿಯ ಧನಾತ್ಮಕ ಅಂಶಗಳಲ್ಲಿ ಒಂದು. ಕಮಲ ಮತ್ತು ಸದಾನಂದರವರ ವಿವಾಹದೊಂದಿಗೆ ಈ ಸದಾನಂದ ಕಾದಂಬರಿ ಅಂತ್ಯಗೊಳ್ಳುತ್ತದೆ.

ಮಧುವನ:

ಸದಾನಂದ ಕಾದಂಬರಿಯ ಅಂತ್ಯದಿಂದ ಮಧುವನ ಆರಂಭವಾಗುತ್ತದೆ. ಮಧುವನ ಸದಾನಂದರ ಎಸ್ಟೇಟಿನ ಹೆಸರು. ವಿಧುರರಾದ ಸದಾನಂದ ವಿಧವೆ ಕಮಲಾಳನ್ನು ಮದುವೆಯಾಗುವುದರ ಮೂಲಕ ಕಮಲಾಳ ಪ್ರವೇಶ ಮಧುವನಕ್ಕೆ ಆಗುತ್ತದೆ. ವಿಧವಾ ವಿವಾಹವೆಂದರೆ ಹುಬ್ಬೇರಿಸುತ್ತಿದ್ದ ಜನರಿಗೆ ಈ ಕಾದಂಬರಿಯ ಮೂಲಕ ದಿಟ್ಟ ಉತ್ತರ ನೀಡಿದ್ದಾರೆ ಎಂದೇ ಹೇಳಬಹುದು. ಕಮಲಳನ್ನು ಸದಾನಂದ ಬದಲಾಯಿಸುವ ರೀತಿ ನಿಜವಾಗಲೂ ಪ್ರತಿಯೊಬ್ಬ ಹೆಣ್ಣು ಮಗಳಿಗೆ ಪಾಠ. ನಾನು ಇದರಿಂದ ಜೀವನದ ಕೆಲವು ಪರಮ ಸತ್ಯಗ್ಫ಼ಳು ಮತ್ತು ಪ್ರಮುಖ ವಿಚಾರಗಳನ್ನು ಕಲಿತೆ. ಇಂದಿರಾರವರು ಬಹಳ ದೂರದೃಷ್ಟಿಯಿಂದ ಈ ಕಾದಂಬರಿಯನ್ನು ಬರೆದಿದ್ದರು ಎಂದೇ ಹೇಳಬೇಕು. ಆಗಿನ ಕಾಲದಲ್ಲಿ ಜನರು ಹೆದರುತ್ತಿದ್ದ C-Section delivery of a child ಬಗ್ಗೆಯೂ ಸಹ ಇಲ್ಲಿ ಪ್ರಸ್ತಾಪವಿದೆ. ಸಾಮಾಜಿಕ ಕಾದಂಬರಿ ಜನರನ್ನು ಬೇಗ ತಲುಪುತ್ತಿದ್ದವಾದ್ದರಿಂದ ಆ ಮೂಲಕ ಜನರನ್ನು ಹೊಸ ವಿದ್ಯಮಾನಗಳಿಗೆ, ಹೊಸ ವಿಚಾರಧಾರೆಗಳಿಗೆ ಪರಿಚಯಿಸುವ ಮತ್ತು ಜಾಗೃತಗೊಳಿಸುವ ಜಬಾಬ್ದಾರಿಯನ್ನು ಲೇಖಕಿ ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ. 
ಮಧುವನ ಕಾದಂಬರಿಯ ಮತ್ತೊಂದು ಹೈಲೈಟ್ ಸಾಹಿತ್ಯ. ಸಾಹಿತ್ಯ ಚಿಂತನೆಯಲ್ಲಿ ಒಡಮೂಡಿರುವ ಹೊಸ ಹೊಸ ಕಲ್ಪನೆ ಮತ್ತು ವಿಚಾರಧಾರೆಯನ್ನು ಸದಾನಂದ ಪಾತ್ರದ ಮೂಲಕ ಲೇಖಕಿ ಅದ್ಭುತವಾಗಿ ಓದುಗರಿಗೆ ದಾಟಿಸಿದ್ದಾರೆ. ಲೇಖನಗಳನ್ನು ಹೇಗೆ ಬರೆಯಬೇಕು, ಕಥೆ ಹೇಗೆ ಹುಟ್ಟುತ್ತದೆ, ಅದು ಕಾದಂಬರಿ ಯಾವಾಗ ಆಗುತ್ತದೆ, ಎಲ್ಲರೂ ಯಾವಗಲೂ ಕಾದಂಬರಿಗಳಾನ್ನು ಏಕೆ ಬೆರೆಯಲಾಗುವುದಿಲ್ಲ ಎಂಬ ಗಹನವಾದ ಪ್ರಶ್ನೆಗಳಿಗೆ  ಸಮರ್ಥವಾದ ಉತ್ತರವಿದೆ. ಮಧುವನ ಕಾದಂಬರಿ ನನಗೆ ಹಿಡಿಸಿದ್ದು ಇದಕ್ಕೇ. 

ಮಿಕ್ಕಿದ್ದೆಲ್ಲಾ ಮಾಮೂಲು. ಎಲ್ಲ ಕಾದಂಬರಿಗಳಲ್ಲೂ ಇರುವುದು. ಆಗಿನ ಕಾಲದ "ಫಾರ್ವರ್ಡ್ ಥಿಂಕಿಂಗ್" ಕಾದಂಬರಿಗಳು ಎನ್ನಲಡ್ಡಿಯಿಲ್ಲ.




Wednesday, July 4, 2018

ಕಪ್ಪಂಚು ಬಿಳಿಸೀರೆ

ಪುಸ್ತಕದ ಹೆಸರು: ಕಪ್ಪಂಚು ಬಿಳಿಸೀರೆ
ತೆಲುಗು ಮೂಲ: ಯಂಡಮೂರಿ ವೀರೇಂದ್ರನಾಥ
ಕನ್ನಡ ಅನುವಾದಕರು: ರಾಜಾ ಚೆಂಡೂರ್
ಪ್ರಕಾಶನ: ಸುಧಾ ಎಂಟರ್ಪ್ರೈಸಸ್

ಈವಾಗಲಾದರೂ ಯಂಡಮೂರಿಯನ್ನು ಓದಿದೆನಲ್ಲಾ ಎಂದು ನೆಮ್ಮದಿಯಾಗುತ್ತಿದೆ. ಅವರು ಬಹಳ ಪ್ರಸಿದ್ಧ ಲೇಖಕರೆಂದು ಗೊತ್ತಿತ್ತು. ಅವರ ಬೆಳದಿಂಗಲ ಬಾಲೆ ಕಾದಂಬರಿ ಚಲನಚಿತ್ರ ಆಗಿದ್ದು ಗೊತ್ತಿತ್ತು. ಆದರೆ ಅವರ ಪುಸ್ತಕಗಳು  ಓದಲು ನಾನು ಇಷ್ಟು ವರ್ಷ ಕಾಯಬೇಕಾಗಬಹುದು ಎಂದು ಊಹಿಸಿರಲಿಲ್ಲ. ಪುಸ್ತಕಗಳನ್ನು ನೀಡಿದ ದೃಶ್ಯ ಪ್ರದೀಪ್ ಗೆ ಧನ್ಯವಾದಗಳು.

ಯಂಡಮೂರಿಯವರ ಲೇಖನ ಶೈಲಿ ಬಹಳ  captivating. ಪುಸ್ತಕ ಹಿಡಿದರೆ ಬಿಡುವ ಹಾಗೇ ಇಲ್ಲದಂತೆ  ಓದುಗನನ್ನು ಸೆರೆಹಿಡಿಯುವ ಅನೂಹ್ಯ ಶೈಲಿ. ಅವರ ಕಾದಂಬರಿಗಳು ಚಿತ್ರಗಳಾಗಿದ್ದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ, they are indeed very thrilling.

ಕಪ್ಪಂಚು ಬಿಳಿಸೀರೆ ಸೀರೆ ವ್ಯಾಪಾರಿಯೊಬ್ಬನ ಜೀವನ ಗಾಥೆ. ಹೈದರಾಬಾದಿನ ಬೀದಿಗಳಲ್ಲಿ ಸೀರೆ ಮಾರುತ್ತಿದ್ದವನೊಬ್ಬ ಕೋಟ್ಯಧಿಪತಿಯಾಗಿ, ಕಂಪನಿಯೊಂದರ ಮುಂದಾಳಾಗಿ, ಔನ್ನತ್ಯದ ಮೆಟ್ಟಿಲೇರಿ, ಅಲ್ಲಿಂದ ತಡವರಿಸಿ ಬಿದ್ದು, ಮತ್ತೆ ಎಚ್ಚೆತ್ತುಕೊಳ್ಳುವ ರೋಚಕ ಕತೆಯೇ ಈ ಕಾದಂಬರಿಯ ಜೀವಾಳ. ಸೀರೆಗಳ ಬಗ್ಗೆ, ಫ್ಯಾಷನ್ ಉದ್ಯಮದ ಬಗ್ಗೆ, ಗ್ರಾಹಕರ ಬಗ್ಗೆ, ಅವರ ಮನಸ್ಥಿತಿಯ ಬಗ್ಗೆ, ಮಾರ್ಕೆಟಿಂಗ್ ಒಳಸುಳಿಗಳು,ದ್ರೋಹ, ಮೋಸ,ಕಪಟ,....ನವರಸಗಳೂ ತುಂಬಿದ ಕಾದಂಬರಿಯಲ್ಲಿ ರೋಚಕತೆ ಒಂದು ತೂಕ ಹೆಚ್ಚು.

ಸಾಮಾಜಿಕ ಕಾದಂಬರಿಗಳನ್ನು ಅಷ್ಟಾಗಿ ಓದದ ನಾನು ಮೊದಲು ಕೈಗೆತ್ತಿಕೊಂಡಿದ್ದೇ ಈ ಪುಸ್ತಕ. ಓದಿ ನಿಜವಾಗಲೂ ಬಹಳಷ್ಟು ಕಲಿತೆ, ಸೀರೆ, ನೀರೆ ಮತ್ತು ವ್ಯಾಪರದ ಬಗ್ಗೆ !

ಇದು ಯಂಡಮೂರಿಯವರ ನಂಬರ್ ಓನ್ ಕಾದಂಬರಿ ಎಂದು ಎಲ್ಲರೂ ಸುಲಭಕ್ಕೆ ಹೊಗಳುವುದಿಲ್ಲ ಎಂದು ಕ್ಲೈಮಾಕ್ಸ್ ಓದಿದ ಮೇಲೆ ಅರ್ಥ ಆಯಿತು.

ಅದ್ಭುತ ಪುಸ್ತಕ.ಸದಾ ನೆನಪಿನಲ್ಲಿರುತ್ತದೆ.