Thursday, June 4, 2015

ಹಸಿವು ಹೆಚ್ಚಿಸುವ ಏಳು ರೊಟ್ಟಿಗಳು

ಪುಸ್ತಕದ ಹೆಸರು: ಏಳು ರೊಟ್ಟಿಗಳು
ಲೇಖಕರು: ಡಾ||ಕೆ. ಎನ್.ಗಣೇಶಯ್ಯ
ಪ್ರಕಾಶಕರು: ಅಂಕಿತ ಪುಸ್ತಕ

ಈ ಕಾದಂಬರಿ ಓದಿದ ತಕ್ಷಣ ನೀವು ಹೈದರಾಬಾದಿಗೆ ಬಸ್ ಹತ್ತಲಿಲ್ಲ ಅಂದರೆ ಕೇಳಿ ! ಓಹ್...ನಮ್ಮ ಪಕ್ಕದ ರಾಜ್ಯದಲ್ಲಿಯೂ ಇಂತಹಾ ರೋಚಕ ಕಥೆಯೊಂದು ನಡೆದಿರಬಹುದು ಎಂಬ ಕಲ್ಪನೆಯೂ ನನಗಿರಲಿಲ್ಲ. ಹೈದರಾಬಾದಿನ ನಿಜಾಮ ಬ್ರಿಟಿಷರಿಗೇ ಸಾಲ ನೀಡುವಷ್ಟು ಶ್ರೀಮಂತನಾಗಿದ್ದ ಎಂಬ ವಿಷಯ ಓದಿಯೇ ನಾನು ದಂಗಾದೆ. ಹೀಗೆಯೇ ಇನ್ನಷ್ಟು ಸತ್ಯಗಳನ್ನು ಬಿಚ್ಚಿಡುತ್ತಾ, ಕೆಲವು ಕಾಲ್ಪನಿಕ ಸಂಗತಿಗಳ ಸುತ್ತ ಕಥೆಯು ಹೆಣೆದುಕೊಂಡಿದೆ. ಇದೊಂದು ಕಿರುಕಾದಂಬರಿಯಾದರೂ ರೋಚಕತೆಯಲ್ಲಿ ಸಾಕಷ್ಟು ಹಿರಿದಾಗಿದೆ.

ಗಣೇಶಯ್ಯ ಅವರ ಇತರ ಕಾದಂಬರಿಗಳಿಗಿಂತಲೂ ಈ ಕಾದಂಬರಿಯಲ್ಲಿ ಐತಿಹಾಸಿಕ ವಿಷಯಗಳು ಸ್ವಲ್ಪ ಹೆಚ್ಚಿದೆ ಅಂತಲೇ ಹೇಳಬಹುದು. ಹಾಗಾಗಿ ಇದು ಸೈ-ಫೈ  ಕಾದಂಬರಿಗಳ ಸಾಲಲ್ಲಿ ನಿಲ್ಲುವುದಿಲ್ಲ.

ಹೈದರಾಬಾದಿನ ನಿಜಾಮನು ಬಚ್ಚಿಟ್ಟ ನಿಧಿಯ ಸುತ್ತ ಈ ಕಥೆಯು ಸುತ್ತುತ್ತದೆ. ಈ ಏಳು ರೊಟ್ಟಿಗಳು ಸಾಮಾನ್ಯವಾದದ್ದಲ್ಲ. ಅವು ಹಸಿವನ್ನು ತಣಿಸದೇ ಮತ್ತಷ್ಟು ಹೆಚ್ಚಿಸುವ ರೊಟ್ಟಿಗಳು.

ಹೈದರಾಬಾದಿನ ಕೆಲವು ಬಹು ಮುಖ್ಯ ಅರಮನೆಗಳಿಗೆ ಏಕೆ ಪ್ರವೇಶವಿಲ್ಲ ಎಂಬ ಕುತೂಹಲ ನಮ್ಮನ್ನು ಕಾಡದಿರುವುದಿಲ್ಲ. ಮತ್ತು, ನಿಷೇದಿತ ಪುಸ್ತಕಗಳ ಮಾರುಕಟ್ಟೆಯೊಂದು ಹೈದರಾಬಾದಿನಲ್ಲಿ ಏಕೆ ಅಸ್ತಿತ್ವದಲ್ಲಿದೆ ಎಂಬುದೂ ನಮಗೆ ಅರ್ಥವಾಗುತ್ತಾ ಹೋಗುತ್ತದೆ.

ಹೈದರಾಬಾದೆಂದರೆ ಬರೀ ಹುಸೇನ್ ಸಾಗರ್ ಲೇಕ್ ಅಲ್ಲ, ಸಫರ್ ದಾರ್ ಜಂಗ್ ಮ್ಯೂಸಿಯಮ್ ಅಲ್ಲ, ಚಾರ್ಮಿನಾರ್ ಅಲ್ಲ, ಅಲ್ಲಿನ ಪ್ರತಿ ಹಳೆಯ ಕಟ್ಟಡವೂ ಇತಿಹಾಸದ ಒಂದು ತುಣುಕಿನ ಸಾಕ್ಷಿಯಾಗಿ ನಿಂತಿದೆ ಎಂದು ಅನಿಸತೊಡಗುತ್ತದೆ.

ಒಟ್ಟಿನಲ್ಲಿ....ಏಳು ರೊಟ್ಟಿಗಳನ್ನು ತಿಂದ ಮೇಲೂ ಹಸಿವು ತೀರಿಲ್ಲ !