Friday, February 23, 2018

ಅಜ್ಞಾತನೊಬ್ಬನ ಆತ್ಮಚರಿತ್ರೆ

ಪುಸ್ತಕದ ಹೆಸರು: ಅಜ್ಞಾತನೊಬ್ಬನ ಆತ್ಮಚರಿತ್ರೆ
ಲೇಖಕರು:ಕೃಷ್ಣಮೂರ್ತಿ ಹನೂರು
ಪ್ರಕಾಶಕರು: ಅಂಕಿತ ಪುಸ್ತಕ.

ನಾನು ಪುಸ್ತಕಗಳನ್ನು ತರಕಾರಿಗಳಂತೆ ಕೆಜಿಗಟ್ಟಲೆ ಕೊಳ್ಳುತ್ತೇನೆ ಮತ್ತು ತರಕಾರಿಗಳನ್ನು ಪುಸ್ತಕದಂತೆ ಆರಿಸಿ ಆರಿಸಿ ಕೊಳ್ಳುತ್ತೇನೆ ಎಂಬ ಆರೋಪ ಮಿಶ್ರಿತ ಹೊಗಳಿಕೆಯನ್ನು ನಮ್ಮ ಮಾತೃಶ್ರೀಯವರು ಆಗಾಗ ನೀಡುತ್ತಿರುತ್ತಾರೆ. ಈ ತರಹ ಕೇಜಿಗಟ್ಟಲೆ ಕೊಂಡ ಪುಸ್ತಕಗಳು ಸಾಮಾನ್ಯ ನಾನು ಟೈಟಲ್ ನೋಡಿ ಕೊಂಡದ್ದಾಗಿರದೇ, ಸ್ವಲ್ಪ ಮುನ್ನುಡಿಯೋ ಬೆನ್ನುಡಿಯೋ ಓದಿ ಕೊಂಡದ್ದಾಗಿರುತ್ತದೆ, ಇಲ್ಲಾಂದರೆ  ಅಂಕಿತ ಪುಸ್ತಕದ  ಸುಧಾ ಆಂಟಿಯ ರೆಕ್ಮೆಂಡೇಷನ್ ಆಗಿರುತ್ತದೆ. ಹಾಗೆಯೇ ೨೦೧೩ ರಲ್ಲಿ ಖರೀದಿಸಿ ಇಟ್ಟುಕೊಂಡಿದ್ದಂತಹ ಪುಸ್ತಕ "ಅಜ್ಞಾತನೊಬ್ಬನ ಆತ್ಮಚರಿತ್ರೆ". ತ.ರಾ.ಸು ರವರ ಚಿತ್ರದುರ್ಗದ ಕಾದಂಬರಿಗಳ ಸೀರೀಸ್ ಅನ್ನು ಓದುತ್ತಿದ್ದ ಕಾಲವದು. ಈ ಪುಸ್ತಕ ಟಿಪ್ಪುಸುಲ್ತಾನನ ದಳವಾಯಿಯೊಬ್ಬನ ಆಗಿನಕಾಲದ ದಿನಚರಿಯಾಧಾರಿತ ಕಾದಂಬರಿ ಎಂದು ಸುಧಾ ಆಂಟಿ ಹೇಳಿದ ತಕ್ಷಣ ಮರುಮಾತಾಡದೇ ಕೊಂಡುತಂದಿದ್ದೆ. ಕೇವಲ ಬಾದಶಾಹಗಳ ದಿನಚರಿಗಳ ಬಗ್ಗೆ ಕೇಳಿದ್ದ ನಾನು(ಅಕ್ಬರ್ ನಾಮ, ಹೈದರ್ ನಾಮ, ಇತ್ಯಾದಿ), ದಳವಾಯಿಯೊಬ್ಬನ ಆತ್ಮಚರಿತ್ರೆಯನ್ನೋದಲು ಬಹಳ ಉತ್ಸಾಹಿತಳಾಗಿದ್ದೆ. ಆದರೆ ಆ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಕೆಲವು ಶುಭ ಸಮಾರಂಭಗಳು ನಡೆದು, ನಾನದರಲ್ಲಿ ಮುಳುಗಿಹೋಗಿದ್ದೆ. ಕಾಲ ಸರಿದಂತೆ ಈ ಪುಸ್ತಕವೂ ನನ್ನ ನೆನಪಿನಿಂದ ಸರಿದು ಹೋಗಿತ್ತು, ೨೦೧೮ ರ ಜನವರಿ ವರೆಗೂ.

ಈ ಪುಸ್ತಕ ನನ್ನ ನೆನಪಿನ ಸಂಚಿಯಿಂದ ಸರಿದು ಹೋಗಿದ್ದೇ ಒಳ್ಳೆಯದಾಯಿತು. ಏಕೆಂದರೆ  ನಾನು ಆ ಪುಸ್ತಕವನ್ನ ಓದಲು ಮಾಡಕೊಳ್ಳಬೇಕಿದ್ದ ಸಿದ್ಧತೆ ೨೦೧೩ ರಲ್ಲಿ  ಮಾಡಿಕೊಂಡಿರಲಿಲ್ಲ, ಮತ್ತು ಈ ಪುಸ್ತಕ ಆ ಸಿದ್ಧತೆಗಳನ್ನು ಬೆಡಬಹುದು ಎಂಬುದೂ ಆಗ ನನಗೆ ಗೊತ್ತಿರಲಿಲ್ಲ. ೨೦೧೭ ರಲ್ಲಿ ನಾನು ಬಿ.ಎಮ್.ಶ್ರೀ.ಪ್ರತಿಷ್ಟಾನದಲ್ಲಿ ಹಳಗನ್ನಡ ರಸಗ್ರಹಣ ಶಿಬಿರವನ್ನು ಅಟೆಂಡ್ ಮಾಡಿದ್ದೆ. ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿದ ಶಿಬಿರ ಅದು.ಅದರ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ.  ಅದು ಮುಗಿದ ನಂತರ ಈಗ ಹಳಗನ್ನಡದಲ್ಲಿ ಡಿಪ್ಲೋಮಾ ಮಾಡುತ್ತಿದ್ದೇನೆ. ಈ ಡಿಪ್ಲೋಮ ತರಗತಿಯಲ್ಲಿ ನಮಗೆ ವೀರಗಲ್ಲು ಮತ್ತು ಶಾಸನಗಳ ಕುರಿತ ಅಧ್ಯಯನದ ಬಗ್ಗೆ ಒಂದು ವಿಶೇಷ ಪಠ್ಯವಿದೆ. ಅಲ್ಲದೆ, ತಾಳೆಗರಿಗಳು, ಅದರ ಅಧ್ಯಯನ ಮತ್ತು ಸಂರಕ್ಷಣೆ ಬಗ್ಗೆ ಸಹ ಪಾಠಗಳಿವೆ. ಇವೆಲ್ಲವನ್ನೂ ನಾನು ಕೇಳಿ,  ಓದುತ್ತಿದ್ದೆ  ಈ ವರ್ಷದ ಜನವರಿಯಲ್ಲಿ.

 ಜನವರಿಯ ಈ ಹೊತ್ತಿಗೆ ಚರ್ಚೆಗೆ ಶಿವನ ಡಂಗುರ ಪುಸ್ತಕವನ್ನು ಓದಿ ಹತಾಶಳಾದ ಸಂದರ್ಭದಲ್ಲಿ, ನಾನು ಮತ್ತು ತೇಜಸ್ವಿನಿ ಹೆಗಡೆ ಫೋನಲ್ಲಿ ಮಾರ್ಚ್ ತಿಂಗಳ ಈ ಹೊತ್ತಿಗೆ ಚರ್ಚೆಗೆ ಯಾವ ಪುಸ್ತಕ ಓದಬಹುದು ಎಂದು ಚರ್ಚಿಸುತ್ತಿದ್ದೆವು. ನಾನು ಆಗ ಹೇಳಿದೆ, " ಅಯ್ಯೋ, ನಾನಿನ್ನೂ ಓದದೇ ಇರುವ ಪುಸ್ತಕಗಳು ಬೇಕಾದಷ್ಟಿದೆ. ಬರೀ ಕೊಂಡು ತಂದು ಶೆಲ್ಫ್ ಎಲ್ಲ ತುಂಬಿಸಿಟ್ಟಿದ್ದೇನೆ. ಮೊದಲು ಅದನ್ನು ಓದುತ್ತೇನೆ. ಆಮೇಲೆ ಅದು ಚರ್ಚೆ ಮಾಡಬಹುದು ಅನಿಸಿದರೆ ಮಾತ್ರ ಈ ಹೊತ್ತಿಗೆಗೆ ಸಜೆಸ್ಟ್ ಮಾಡುತ್ತೇನೆ" ಅಂತ. ಆಗ, ನನ್ನ ಬುಕ್ ಶೆಲ್ಫ್ ನಲ್ಲಿ ನನಗೆ ಕಂಡ ಪುಸ್ತಕವೇ ಅಜ್ಞಾತನೊಬ್ಬನ ಆತ್ಮಚರಿತ್ರೆ. ಇದನ್ನು ಅವರಿಗೂ ಹೇಳಿದೆ. ಅದಕ್ಕೆ ಅವರು, ಮೊದಲು ನೀವು ಓದಿ, ಆಮೇಲೆ ನನಗೆ ಹೇಳಿ,ಮತ್ತೆ ಯೋಚಿಸೋಣ ಅಂದರು.

ಫೋನಿಟ್ಟು ಪುಸ್ತಕವನ್ನು ತೆರೆದು ಓದಲು ಪ್ರಾರಂಭಿಸಿದೆ. ಮುನ್ನುಡಿ ಓದಿದ ತಕ್ಷಣವೇ ನಾನು ಕುಣಿಯುತ್ತಿದ್ದೆ ! ಮಲೈ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಇರುವ ಒಂದು ವೀರಗಲ್ಲು, ಮತ್ತು ಅದರ ಮೇಲೆ ಕೆತ್ತಿಸಿರುವ ಶಾಸನದ ಪಠ್ಯದಿಂದ ಕಾದಂಬರಿ ಪ್ರಾರಂಭವಾಗುತ್ತದೆ. ಅಲ್ಲಿ ಅವರು ಬಳಸಿದ ಪದಗಳೆಲ್ಲ ಓದಿ, ಸಧ್ಯ ನಾನು ಶಾಸನಗಳ ಬಗ್ಗೆ ತಿಳಿದದ್ದು ಸಾರ್ಥಕವಾಯಿತು ಎಂದು ಖುಶಿ ಪಟ್ಟೆ. ಶಾಸನಗಳ ಬಗ್ಗೆ ಅಧ್ಯಯನ ಮಾಡಿಲ್ಲದವರಿಗೆ ಸಹ ಇದು ಅರ್ಥವಾಗುತ್ತದೆಯಾದರೂ,ಶಾಸನಗಳನ್ನು ಅಧ್ಯಯನ ಮಾಡಿದವರಿಗೆ ಈ ಶಾಸನವನ್ನು ಅರ್ಥೈಸಲು ಕಾದಂಬರಿಕಾರ ಪಟ್ಟ ಕಷ್ಟದ ಸಂಪೂರ್ಣ ಅರಿವಾಗುತ್ತದೆ. ಆಮೇಲೆ, ಈ ಕಾದಂಬರಿಕಾರರ ಬಗ್ಗೆ ಮತ್ತಷ್ಟು ತಿಳಿಯಬೇಕೆಂಬ ಕುತೂಹಲ ಕೆರಳಿತು. ಲೇಖಕರ ಪರಿಚಯವನ್ನು ಪುಸ್ತಕದದ ಕಡೆಯ ಪುಟದಲ್ಲಿ ನೀಡಲಾಗಿತ್ತು. ಅದನ್ನೋದಿದ ಮೇಲೆ ಗೊತ್ತಾಯಿತು, ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದವರು, ಜಾನಪದ ಸಾಹಿತ್ಯದಲ್ಲಿ ಪಿ ಎಚ್.ಡಿ ಪಡೆದಿದ್ದಾರೆ ಎಂದು . ಕ್ಷೇತ್ರ ಕಾರ್ಯದಲ್ಲಿ ತೊಡಗಿದಾಗ ಅವರಿಗೆ ಸಿಕ್ಕ ಕೆಲವು ಜಾನಪದ ಕಥೆಗಳನ್ನು ಆಧರಿಸಿ, ಕಲ್ಪನೆಗಳನ್ನು ಹದವಾಗಿ ಬೆರೆಸಿ ಈ ಕಾದಂಬರಿ ರಚಿಸಿರುವುದರ ಬಗ್ಗೆ ಅವರು ಮುನ್ನುಡಿ ಮತ್ತು ಟಿಪ್ಪಣಿಗಳಲ್ಲಿ ಹೇಳಿಕೊಂಡಿದ್ದಾರೆ.

ಯುದ್ಧದಲ್ಲಿ ಹೋರಾಡುವ ಸೈನಿಕನ ಶೌರ್ಯ ಸಾಹಸಗಳ ವರ್ಣನೆ ನಾವು ಬಹಳ ಕೇಳಿರುತ್ತೇವೆ. ನಮಗೆ ವೀರ ಎಂದರೆ ಒಂದು ನಿರ್ದಿಷ್ಟ ಕಲ್ಪನೆ ಇರುತ್ತದೆ. ಈ ಕಾದಂಬರಿ ನಮಗೆ ವೀರರ ಇನ್ನೊಂದು ಮುಖದ ದರ್ಶನ ಮಾಡಿಸುತ್ತದೆ. ಹೆಚ್ಚು ಹೇಳಿದರೆ ಕಾದಂಬರಿಯ ಕಥೆಯನ್ನು ಹೇಳಿಬಿಟ್ಟಂತಾಗುತ್ತದೆ. ಆದ್ದರಿಂದಸ್ವಲ್ಪವೇ ಗುಟ್ಟು ಬಿಟ್ಟುಕೊಡುತ್ತೇನೆ. ಟಿಪ್ಪು ಸುಲ್ತಾನನನ್ನು ಕಣ್ಣಾರೆ ಕಂಡ, ಅವ್ಅನ ಖಾಸಾ ಬಂಟನಾಗಿದ್ದ ಈ ವೀರಗಲ್ಲಿನ  ದಳವಾಯಿ, ಸುಲ್ತಾನನಿಂದ ಒಂದು ಕೆಲಸಕ್ಕೆ ನೇಮಿಸಲ್ಪಟ್ಟು ಹತ್ತಿಪ್ಪತ್ತು ಸೈನಿಕರೊಂದಿಗೆ ಮಲೈ ಮಹದೇಶ್ವರ ಬೆಟ್ಟದ ತಪ್ಪಲಿನ ಕಡೆಗೆ ತೆರಳುತ್ತಾನೆ. ಕಾವೇರಿ ನದಿ ದಂಡೆಯಲ್ಲಿ ಸಂಭವಿಸುವ ಒಂದು ಅಪಘಾತ ದಳವಾಯಿಯ ಜೀವನದ ದಿಕ್ಕನ್ನೇ ಬದಲಿಸಿಬಿಡುತ್ತದೆ. ಕ್ಷಣ ಕ್ಷಣಕ್ಕೂ ರೋಚಕವಾಗಿರುವ ಈ ಕಾದಂಬರಿ ಕೊನೆಯಲ್ಲಿ ಕಣ್ಣಂಚು ತೇವವಾಗಿಸುತ್ತದೆ.

ಈ ಕಥೆಯು ಕೆಲವೆಡೆ ಆರ್.ಕೆ.ನಾರಾಯಣ್ ಅವರ "ದಿ ಗೈಡ್" ಕಥೆಯನ್ನು ನೆನಪಿಸುತ್ತದೆಯಾದರು, ಯಾರ ಕಥೆ ಯಾರಿಗೆ ಸ್ಪೂರ್ತಿಯಾಗಿದೆ ಎಂದು ಹೇಳಲು ಕಷ್ಟವಾಗುತ್ತದೆ.ಈ ಕಾದಂಬರಿಯ ಆಧಾರ ಜಾನಪದ ಎಂದು ಕಾದಂಬರಿಕಾರರು ಟಿಪ್ಪಣಿಗಳಲ್ಲಿ ಕಥೆಯ ಮೂಲದ  ಬಗ್ಗೆ ಕೂಲಂಕುಷವಾಗಿ ತಿಳಿಸಿದ್ದಾರೆ. ಮೂವತ್ತು ಪುಟಗಳ ದಫ್ತರದ ಕಥೆಯೊಂದು ಇನ್ನೂರು  ಚಿಲ್ಲರೆ ಪುಟಗಳ ಕಾದಂಬರಿಯಾದದ್ದು ಹೇಗೆ ಎಂದು ಏಳುವ ಪ್ರಶ್ನೆಗೆ ಅವರ ವಿದ್ವತ್ತು, ಕಥನ ಶಕ್ತಿ ಮತ್ತು ಕಲ್ಪನಾ ಸಾಮರ್ಥ್ಯಗಳು ಕಾದಂಬರಿಯುದ್ದಕ್ಕೂ ಉತ್ತರವಾಗಿ ನಿಲ್ಲುತ್ತಾ ಹೋಗುತ್ತದೆ. ಈ ಕಾದಂಬರಿ ನನಗೆ ಎಷ್ಟು ಇಷ್ಟವಾಗಿದೆ ಎಂದರೆ, ಸುಮಾರು ಹದಿನೈದು ದಿನ ನಾನು ಮಲೈ ಮಹದೇಶ್ವರ ಬೆಟ್ಟಗಳಲ್ಲಿ ಮಾನಸಿಕವಾಗಿ ಸುತ್ತಾಡಿದ್ದೇನೆ. ವೀರಗಲ್ಲನ್ನು ನಾನು ಓದಿದ ರೀತಿಗಳಲ್ಲಿ ಕಲ್ಪಿಸಿಕೊಂಡಿದ್ದೇನೆ. ಕೊನೆಗೆ ಯಾವುದೂ ಸರಿಹೋಗದೆ, ಈ ಕಥೆಯ ವೀರಗಲ್ಲು ಸುಳ್ಳೋ ನಿಜವೋ ಎಂದು ಲೇಖಕರಿಗೆ ಪತ್ರವನ್ನೂ ಬರೆಯಲು ಯೋಚಿಸಿದ್ದೇನೆ. ಸಿಕ್ಕಾಪಟ್ಟೆ ಕುತೂಹಲ ಇದೆ, ಅವರು ಕಥಾಸಾಮಾಗ್ರಿಯನ್ನು ಸಂಗ್ರಹಿಸಿಕೊಂಡ ರೀತಿಗಳಲ್ಲಿ, ಮತ್ತು ಅವರು ಇದೇ ವಸ್ತುವನ್ನು ಏಕೆ ಆರಿಸಿಕೊಂಡರು ಎಂಬ ವಿಷಯದಲ್ಲಿ. I know curiosity kills the cat, but I am ready to get killed. ಈ ಪೋಸ್ಟ್ ಬರೆದ ತಕ್ಷಣ ನಾನು ಮಾಡುವ ಮುಂದಿನ ಕೆಲಸವೇ ಲೇಖಕರಿಗೆ ಪತ್ರ ಬರೆಯುವುದು !

ಈ ಪುಸ್ತಕ ನಮ್ಮ ಹಲವಾರು ಭ್ರಮೆಗಳನ್ನು ಹುಸಿಗೊಳಿಸಿದರೂ ಹೊಸ ಕಲ್ಪನೆಗಳನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ. ಅದಕ್ಕೆ ಹನೂರರಿಗೆ ಧನ್ಯವಾದ ಹೇಳಲೇ ಬೇಕಿದೆ. ಅವರ ವಿದ್ವತ್ತಿಗೆ ಶರಣು. Seriously , ಇದೊಂದು ಓದಲೇ ಬೇಕಾದ ಪುಸ್ತಕ. Thanks ಸುಧಾ ಆಂಟಿ ಈ ಅದ್ಭುತ ರೆಕ್ಮೆಂಡೇಷನ್ ಗೆ ! Better late than never ಎನ್ನುವ ಹಾಗೆ ಈಗಲಾದರೂ ಪುಸ್ತಕ ಓದಿದೆನಲ್ಲ, ನನ್ನ ಪುಣ್ಯ !

Sunday, January 28, 2018

ಸದ್ದೇ ಮಾಡದ ಶಿವನ ಡಂಗುರ

ಪುಸ್ತಕದ ಹೆಸರು: ಶಿವನ ಡಂಗುರ
ಲೇಖಕರು: ಚಂದ್ರಶೇಖರ ಕಂಬಾರ
ಪ್ರಕಾಶಕರು: ಅಂಕಿತ ಪುಸ್ತಕ

ಈ ಪೋಸ್ಟನ್ನು ಬರೆಯಲು ಮನಸ್ಸಿಗೆ ಬಹಳ ಬೇಜಾರಾಗುತ್ತಿದ್ದರೂ, ನನಗಾದ ಅನುಭವ ಮತ್ತೊಬ್ಬರಿಗೆ ಆಗದಿರಲಿ ಎಂಬ ಏಕೈಕ ಉದ್ದೇಶದಿಂದ ನಾನು ಬರೆಯಬೇಕಾಗಿದೆ. ಈ ಪುಸ್ತಕ ಬಿಡುಗಡೆಯಾದ ಸಂದರ್ಭದಲ್ಲಿ, ನಾನು ಎಲ್ಲರಂತೆ ಎದ್ದು ಬಿದ್ದು ಆನ್ಲೈನ್ ನಲ್ಲಿ ಆರ್ಡರ್ ಮಾಡಿ ಈ ಪುಸ್ತಕ ತರಿಸಿಕೊಂಡೆ. ಈ ಪುಸ್ತಕದ ಶೀರ್ಷಿಕೆ ಕೇಳಿ,ಪುಳಕಿತಳಾಗಿ,  ನಾನಿದನ್ನು ಪಾಣಿನಿಯ ಮಾಹೇಶ್ವರ ಸೂತ್ರದ ಕಥೆಗೆ ಲಿಂಕ್ ಮಾಡಿ, ಇದು ಭಾಷಾ ಸಾಹಿತ್ಯದ ಮಜಲುಗಳನ್ನು ಭೇದಿಸುವ ಕಾದಂಬರಿ ಇರಬಹುದು, ಅಥವಾ ಭಾಷೆಗಳಲ್ಲಿ ಕಾಲಂತರಗಳಲ್ಲಿ ಉಂಟಾದ ಘರ್ಷಣೆಯ ಬಗ್ಗೆ ಇರಬಹುದು ಅಥವಾ ಶಿವನ ಬಗ್ಗೆಯೇ ಇರಬಹುದೆಂದು ಎಲ್ಲ ಊಹಿಸಿ ಈ ಕಾದಂಬರಿ ಓದಲು ತವಕಿಸಿದೆ. ಕಂಬಾರರ ಮಿಕ್ಕೆಲ್ಲಾ ಪುಸ್ತಕಗಳ ಮೇಲಿದ್ದ ವಿಶ್ವಾಸ ಬೇರೆ ಹೆಚ್ಚಿತ್ತು.  ನಾನು ಈ ಪುಸ್ತಕದ ಬಗ್ಗೆ ಇಷ್ಟೆಲ್ಲಾ ಅಪೇಕ್ಷೆಗಳನ್ನು ಇಟ್ಟುಕೊಂಡಿದ್ದು ನನ್ನ ಮೊದಲನೆಯ ತಪ್ಪು. ಪುಸ್ತಕ  ಕೈ ತಲುಪಿದರೂ ದೌರ್ಭಾಗ್ಯ ವಶಾತ್ ನನಗೆ ಈ ಪುಸ್ತಕವನ್ನು ಆಗಿನಿಂದ ಓದಲೇ ಆಗಿರಲಿಲ್ಲ. ಅದಾದ ಮೇಲೆ ಯಾಕೋ ಏನೋ, ಸುಮಾರು ಎರಡು ವರ್ಷಗಳು ನಾನು ಯಾವುದೂ ಹೊಸ ಪುಸ್ತಕಗಳನ್ನೇ ಕೊಳ್ಳಲಿಲ್ಲ, ಓದಲೂ ಇಲ್ಲ. ಇದು ನಾನು ಮಾಡಿದ ಎರಡನೆಯ ತಪ್ಪು. ಇಂತಿರ್ಪ ಸಂದರ್ಭದಲ್ಲಿ, ನಮ್ಮ ಈ ಹೊತ್ತಿಗೆ ಚರ್ಚಾ ಬಳಗಕ್ಕೆ ನಾನೇ ಈ ಪುಸ್ತಕವನ್ನು ಓದಿ ಚರ್ಚೆ ಮಾಡಲು ಸಲಹೆಯನ್ನು ಕೊಟ್ಟೆ. ಇದು ನಾನು ಮಾಡಿದ ಮೂರನೆಯ ತಪ್ಪು.

ನಾಲ್ಕನೆಯ ಮತ್ತು ಕಟ್ಟಕಡೆಯ ತಪ್ಪು (ಈ ಪುಸ್ತಕದ ಕುರಿತಾಗಿ) ಒಂದಿದೆ. ಮುನ್ನುಡಿ, ಬೆನ್ನುಡಿ ಓದದೆ ನೇರವಾಗಿ ಪುಸ್ತಕ ಓದಲು ಪ್ರಾರಂಭಿಸಿದ್ದು.

ಪುಸ್ತಕ ಓದಲು ಪ್ರಾರಂಭಿಸಿದಾಗ ನನ್ನ ಊಹಾಸೌಧ ಕುಸಿದು ಬೀಳಲು ಐದು ಪುಟಗಳೂ ಹಿಡಿಯಲಿಲ್ಲ. ಆದ ಆಶಾಭಂಗವನ್ನು ಸಾವರಿಸಿಕೊಳ್ಳಲು ಆಗ ಮುನ್ನುಡಿ ಮತ್ತು ಬೆನ್ನುಡಿ ಓದಿದೆ.  ಆಗ ಗೊತ್ತಾಯಿತು ಇದು ನಗರೀಕರಣಕ್ಕೆ ತೆರೆದುಕೊಳ್ಳುವ ಹಳ್ಳಿಯ ತವಕ ತಲ್ಲಣಗಳನ್ನು ಆಧರಿಸಿದ ಕಾದಂಬರಿ ಎಂದು. ಆಯ್ತು, ವಿಷಯ ಪ್ರಸ್ತುತವಾಗಿಯೇ ಇದೆ ಎಂದು ಓದು ಮುಂದುವರೆಸಿದೆ. ಒಬ್ಬೊಬ್ಬರೇ ಪಾತ್ರದ ಪರಿಚಯ ಆಗುತ್ತಾ ಹೋಯಿತು. ಊರ ಗೌಡ, ಭಾಗೀರತಿ, ನಮಶ್ಶಿವಾಯ ಸ್ವಾಮಿ, ಚಂಬಸ,ಶಾರಿ, ಮಾದೇವಿ, ಹೀಗೆ..ಎಲ್ಲರೂ. ಕಥೆಯು ಓದಿಸಿಕೊಳ್ಳುತ್ತಾ ಹೋಯಿತು. ಕೆಲವೆಡೆ ಕೆಲ ಸಾಲುಗಳು ಇಷ್ಟವಾಗುತ್ತಾ ಹೋಯಿತು, ಜೊತೆಗೆ ಕಥೆಯೂ.
ಈ ಕುಂಟಿರಪ ಎನ್ನುವ ಪಾತ್ರ ಕಾದಂಬರಿಯಲ್ಲಿ ಕಾಣಿಸಿಕೊಂಡ ಮೇಲೆ, ಆ ಪಾತ್ರ ಮಾಡುವ ಕೆಲಸಗಳು, ಮಾಡಿಸುವ ಕೆಲಸಗಳಿಂದ ಇಡೀ ಕಾದಂಬರಿ ತನ್ನ ಘನತೆ ಮತ್ತು ಓಘ ಎರಡನ್ನೂ ಕಳೆದುಕೊಳ್ಳುತ್ತದೆ. ಏಕೆಂದರೆ, ಘಟನೆಗಳು ತುಂಬಾ  ಸಿನಿಮೀಯ, ಮತ್ತು ಎಲ್ಲಾ ತಿರುವುಗಳು predictable. ಕೆಲ ಪಾತ್ರಗಳ ಮನಸ್ಥಿತಿಗಳು ತರ್ಕಕ್ಕೆ ನಿಲುಕದಾದವು. ಕಂಬಾರರ ಕಥನ ಶಕ್ತಿಯನ್ನು ಕರಿಮಾಯಿ, ಸಂಗ್ಯಾ ಬಾಳ್ಯಾ ಅಂತಹ ಕಾದಂಬರಿಗಳಲ್ಲಿ ಕಂಡವರಿಗೆ ಈ ಕಾದಂಬರಿ ಅವರೇನಾ ಬರೆದದ್ದು ಅನ್ನುವಷ್ಟು ಆಶ್ಚರ್ಯ ಹುಟ್ಟಿಸುತ್ತದೆ.
ಕಾದಂಬರಿಗಳ ಬಗ್ಗೆ ನಮ್ಮ ಸಾಮಾನ್ಯ ಕಲ್ಪನೆ ಏನೆಂದರೆ, ಅದು ಕಡೇ ಪಕ್ಷ ಒಂದು ವಾರ ನಮ್ಮನ್ನು ಕಾಡಬೇಕು. ಈ ಕಾದಂಬರಿಯ ಕಥಾ ವಸ್ತು ಮತ್ತದರ ಪಾತ್ರಗಳು ನನ್ನನ್ನು ಮೂರು ದಿನವೂ ಕಾಡದೇ ಹೋಯಿತು, ಶಾರಿಯ ಪಾತ್ರವೊಂದನ್ನು ಬಿಟ್ಟು. ಆ ಪಾತ್ರ ನಾಲ್ಕು ದಿನ ತಲೆಯೊಳಗಿತ್ತು, ಯಾಕಂದರೆ ಆ  ಪಾತ್ರದ ಮನಸ್ಥಿತಿ ಇನ್ನೂ ನನ್ನ ತರ್ಕಕ್ಕೆ ನಿಲುಕಿಲ್ಲ, ಪ್ರಾಯಶಃ ನಿಲುಕುವುದೂ ಇಲ್ಲ.
ಹಳ್ಳಿಗರ ಧನದಾಸೆ, ಸಿಟಿಯವರ ಆಡಂಬರ, ಅವರ ನಯವಂಚಕತೆ,  ಹಳ್ಳೀಗರ ಮುಗ್ಧತೆಯ ದುರುಪಯೋಗ ಇವೆಲ್ಲ ಕಾದಂಬರಿಯ ಪೂರ್ವಾರ್ಧದಲ್ಲಿ ಬಹಳ ಸಮರ್ಥವಾಗಿ ಬಳಸಿಕೊಳ್ಳಲಾಗಿದೆಯಾದರೂ, ಉತ್ತರಾರ್ಧ ನಮ್ಮನ್ನು ತೀರಾ ನಿರಾಸೆಗೊಳಿಸುತ್ತದೆ. ಒಟ್ಟಿನಲ್ಲಿ, ಶೀರ್ಷಿಕೆ ನೋಡಿ, ಚೆನ್ನಾಗಿದೆಯೆಂದು ನಂಬಿ, ನಾನು ಓದದೇ ಬೆರೆಯವರಿಗೆ ಓದಲು ಪ್ರೇರೇಪಿಸಿ, ಆನಂತರದಲ್ಲಿ ಓದಿ ನಿರಾಶಳಾದ ಪ್ರಪ್ರಥಮ ಕಾದಂಬರಿ ಇದು. ಕಂಬಾರರೇ I am sorry, I am not impressed by this novel. ಏಕೆಂದರೆ, ಶಿವನ ಡಂಗುರದ ಸದ್ದು ನನಗೆ ಖಂಡಿತಾ ಜೋರಾಗಿ ಕೇಳಲಿಲ್ಲ.

Thursday, June 4, 2015

ಹಸಿವು ಹೆಚ್ಚಿಸುವ ಏಳು ರೊಟ್ಟಿಗಳು

ಪುಸ್ತಕದ ಹೆಸರು: ಏಳು ರೊಟ್ಟಿಗಳು
ಲೇಖಕರು: ಡಾ||ಕೆ. ಎನ್.ಗಣೇಶಯ್ಯ
ಪ್ರಕಾಶಕರು: ಅಂಕಿತ ಪುಸ್ತಕ

ಈ ಕಾದಂಬರಿ ಓದಿದ ತಕ್ಷಣ ನೀವು ಹೈದರಾಬಾದಿಗೆ ಬಸ್ ಹತ್ತಲಿಲ್ಲ ಅಂದರೆ ಕೇಳಿ ! ಓಹ್...ನಮ್ಮ ಪಕ್ಕದ ರಾಜ್ಯದಲ್ಲಿಯೂ ಇಂತಹಾ ರೋಚಕ ಕಥೆಯೊಂದು ನಡೆದಿರಬಹುದು ಎಂಬ ಕಲ್ಪನೆಯೂ ನನಗಿರಲಿಲ್ಲ. ಹೈದರಾಬಾದಿನ ನಿಜಾಮ ಬ್ರಿಟಿಷರಿಗೇ ಸಾಲ ನೀಡುವಷ್ಟು ಶ್ರೀಮಂತನಾಗಿದ್ದ ಎಂಬ ವಿಷಯ ಓದಿಯೇ ನಾನು ದಂಗಾದೆ. ಹೀಗೆಯೇ ಇನ್ನಷ್ಟು ಸತ್ಯಗಳನ್ನು ಬಿಚ್ಚಿಡುತ್ತಾ, ಕೆಲವು ಕಾಲ್ಪನಿಕ ಸಂಗತಿಗಳ ಸುತ್ತ ಕಥೆಯು ಹೆಣೆದುಕೊಂಡಿದೆ. ಇದೊಂದು ಕಿರುಕಾದಂಬರಿಯಾದರೂ ರೋಚಕತೆಯಲ್ಲಿ ಸಾಕಷ್ಟು ಹಿರಿದಾಗಿದೆ.

ಗಣೇಶಯ್ಯ ಅವರ ಇತರ ಕಾದಂಬರಿಗಳಿಗಿಂತಲೂ ಈ ಕಾದಂಬರಿಯಲ್ಲಿ ಐತಿಹಾಸಿಕ ವಿಷಯಗಳು ಸ್ವಲ್ಪ ಹೆಚ್ಚಿದೆ ಅಂತಲೇ ಹೇಳಬಹುದು. ಹಾಗಾಗಿ ಇದು ಸೈ-ಫೈ  ಕಾದಂಬರಿಗಳ ಸಾಲಲ್ಲಿ ನಿಲ್ಲುವುದಿಲ್ಲ.

ಹೈದರಾಬಾದಿನ ನಿಜಾಮನು ಬಚ್ಚಿಟ್ಟ ನಿಧಿಯ ಸುತ್ತ ಈ ಕಥೆಯು ಸುತ್ತುತ್ತದೆ. ಈ ಏಳು ರೊಟ್ಟಿಗಳು ಸಾಮಾನ್ಯವಾದದ್ದಲ್ಲ. ಅವು ಹಸಿವನ್ನು ತಣಿಸದೇ ಮತ್ತಷ್ಟು ಹೆಚ್ಚಿಸುವ ರೊಟ್ಟಿಗಳು.

ಹೈದರಾಬಾದಿನ ಕೆಲವು ಬಹು ಮುಖ್ಯ ಅರಮನೆಗಳಿಗೆ ಏಕೆ ಪ್ರವೇಶವಿಲ್ಲ ಎಂಬ ಕುತೂಹಲ ನಮ್ಮನ್ನು ಕಾಡದಿರುವುದಿಲ್ಲ. ಮತ್ತು, ನಿಷೇದಿತ ಪುಸ್ತಕಗಳ ಮಾರುಕಟ್ಟೆಯೊಂದು ಹೈದರಾಬಾದಿನಲ್ಲಿ ಏಕೆ ಅಸ್ತಿತ್ವದಲ್ಲಿದೆ ಎಂಬುದೂ ನಮಗೆ ಅರ್ಥವಾಗುತ್ತಾ ಹೋಗುತ್ತದೆ.

ಹೈದರಾಬಾದೆಂದರೆ ಬರೀ ಹುಸೇನ್ ಸಾಗರ್ ಲೇಕ್ ಅಲ್ಲ, ಸಫರ್ ದಾರ್ ಜಂಗ್ ಮ್ಯೂಸಿಯಮ್ ಅಲ್ಲ, ಚಾರ್ಮಿನಾರ್ ಅಲ್ಲ, ಅಲ್ಲಿನ ಪ್ರತಿ ಹಳೆಯ ಕಟ್ಟಡವೂ ಇತಿಹಾಸದ ಒಂದು ತುಣುಕಿನ ಸಾಕ್ಷಿಯಾಗಿ ನಿಂತಿದೆ ಎಂದು ಅನಿಸತೊಡಗುತ್ತದೆ.

ಒಟ್ಟಿನಲ್ಲಿ....ಏಳು ರೊಟ್ಟಿಗಳನ್ನು ತಿಂದ ಮೇಲೂ ಹಸಿವು ತೀರಿಲ್ಲ !

Monday, May 25, 2015

ಹೊಟ್ಟೆ ಹುಣ್ಣಾಗಿಸುವ ತಮಿಳು ತಲೆಗಳು

ಪುಸ್ತಕದ ಹೆಸರು: ತಮಿಳು ತಲೆಗಳ ನಡುವೆ
ಲೇಖಕರು: ಡಾ||.ಬಿ.ಜಿ.ಎಲ್.ಸ್ವಾಮಿ
ಪ್ರಕಾಶಕರು: ಐ.ಬಿ.ಎಚ್.

ನನ್ನ ಹುಟ್ಟು ಹಬ್ಬಕ್ಕೆ ಪತಿದೇವರು Kindle Paperwhite Ebook reader  ಅನ್ನು ಉಡುಗೊರೆಯಾಗಿ ಕೊಟ್ಟಿದ್ದರು. ನಾನು ಅದನ್ನು ಬರೋಬ್ಬರಿ ಎಂಟು ತಿಂಗಳು ಧೂಳು ಹಿಡಿಸಿದ್ದೆ. ಈಗ ಅನಾಯಾಸವಾಗಿ  ನನಗೆ ಸಿಕ್ಕಾಪಟ್ಟೆ ಸಮಯ ದೊರೆತಿರುವ ಶುಭ ಸಂದರ್ಭದಲ್ಲಿ, ಕಿಂಡಲ್ ಮೇಲೆ ಪ್ರಯೋಗಗಗಳನ್ನು ನಡೆಸಲು ಅಂತರಜಾಲದಿಂದ ಕೆಲವು ಕನ್ನಡ ಪುಸ್ತಕಗಳನ್ನು ಡೌನ್ ಲೋಡ್ ಮಾಡಿಕೊಂಡೆ. ಬಹಳ ವರ್ಷಗಳಿಂದ ಹುಡುಕುತ್ತಿದ್ದ  ಈ ಪುಸ್ತಕ ಕೈಗೆ ಸಿಕ್ಕಾಗ ಬಹಳ ಖುಷಿಯಾಯಿತು.

ಬಿ.ಜಿ.ಎಲ್.ಸ್ವಾಮಿಯವರ ಹಾಸ್ಯಪ್ರಜ್ಞೆ ಅಮೋಘವಾದದ್ದು. ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ಅಧ್ಯಾಪಕರಾಗಿದ್ದ ಅವರ ಉದ್ಯೋಗ ರಂಗದ ವಿಶಿಷ್ಟ ಅನುಭವಗಳನ್ನು ಬಹಳ ಸೊಗಸಾಗಿ ಮತ್ತು ಹಾಸ್ಯಮಯವಾಗಿ ಕಾಲೇಜು ರಂಗ ಮತ್ತು ಕಾಲೇಜು ತರಂಗ ಪುಸ್ತಕಗಳಲ್ಲಿ ವರ್ಣಿಸಿದ್ದಾರೆ. ತಮಿಳು ತಲೆಗಳ ನಡುವೆ ಪುಸ್ತಕದಲ್ಲಿ ತಮಿಳರ ಭಾಷಾಭಿಮಾನ, ತಮಿಳ ಸಾಹಿತ್ಯ ಚರಿತ್ರೆಯ ಕುರಿತದ್ದಾಗಿದೆ.ಸ್ವಾಮಿಯವರು ಸಸ್ಯಶಾಸ್ತ್ರ ಪ್ರಾಧ್ಯಾಪಕರಲ್ಲವೇ ? ಅವರಿಗೆ ತಮಿಳು ಚರಿತ್ರೆಯ ಗೊಡವೆಯಾಕೆ ಎಂದು ನೀವು ಕೇಳಬಹುದು. ನನಗೂ ಸಹಜವಾಗಿ ಈ ಪ್ರಶ್ನೆ ಮೂಡಿತು. ಆದರೆ, ಆಶ್ಚರ್ಯಕರ ವಿಷಯವೇನೆಂದರೆ ಸ್ವಾಮಿಯವರು ತಮಿಳು ಚರಿತ್ರೆಯ ಬಗ್ಗೆಯೂ ಸಾಕಷ್ಟು  ಸಂಶೋಧನೆಗಳನ್ನು ನಡೆಸಿ ಪೇಪರ್ ಗಳನ್ನು ಪ್ರಕಟಿಸಿದ್ದಾರೆ. ತಮಿಳರು ಅವರ ಭಾಷಾಭಿಮಾನಕ್ಕೆ ಹೆಸರಾದಂಥವರು. ಅವರ ಸಾಹಿತ್ಯ ಚರಿತ್ರೆಯಲ್ಲಿನ ಕೆಲವು loopholes ಗಳು ಅವರಿಗೂ ತಿಳಿದಿದ್ದರೂ ಸಹ  ಅದನ್ನು ಒಪ್ಪಿಕೊಳ್ಳದಿರುವ ಹಲವಾರು ಪ್ರಸಂಗಗಳನ್ನು ಬಿ.ಜಿ.ಎಲ್.ಸ್ವಾಮಿಯವರು ಅತ್ಯಂತ ಹಾಸ್ಯಮಯವಾಗಿ ವರ್ಣಿಸಿದ್ದಾರೆ. ಅದಕ್ಕೆ ಅವರು " ತಮಿಳೇತರ, ತಮಿಳು ದ್ರೋಹಿ" ಇತ್ಯಾದಿ ಬಿರುದಾಂಕಿತಗಳಿಂದ ನಿಂದಿಸಲ್ಪಟ್ಟಿದ್ದಾರೆ ಸಹ. 

ಇದ್ದ ಸತ್ಯವನ್ನು ಒಪ್ಪಿಕೊಳ್ಳದಿರುವುದು ವೈಜ್ಞಾನಿಕ ಸಂಶೋಧನೆಗಳಲ್ಲಿ ಮಾತ್ರ ನಡೆಯುತ್ತದೆ ಎಂದು ಭಾವಿಸಿದ್ದ ನನಗೆ ಈ ಪುಸ್ತಕ ಕಣ್ತೆರೆಸಿತು. ಚರಿತ್ರೆಯ ಅಧ್ಯಯನದಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಉಪಯೋಗಿಸಿ ಕಂಡುಹಿಡಿದ ಸತ್ಯಗಳನ್ನು ಚರಿತ್ರಕಾರರು ಒಪ್ಪಿಕೊಳ್ಳರು ಎಂಬ ಸತ್ಯದ ಅರಿವಾಯಿತು.ಇದು ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಿಸಿರುವ ಒಂದು ಪಿಡುಗು ಎಂದು ತಿಳಿಯಿತು. ಪ್ರಬಲ ವಿರೋಧ ಮತ್ತು ಬಹಿಷ್ಕಾರದ ನಡುವೆಯೂ ಬಿ.ಜಿ.ಎಲ್.ಸ್ವಾಮಿಯವರು ಸತ್ಯದ ಪ್ರತಿಪಾದನೆಯಿಂದ ಹಿಂಜರಿಯದಿರುವುದು ಅವರ ವ್ಯಕ್ತಿತ್ವ ಘನತೆ, ಸತ್ಯಕ್ಕೆ ಅವರ ನಿಷ್ಟೆ ಮತ್ತು ಬದ್ಧತೆಯನ್ನು ತೋರಿಸುತ್ತದೆ. ಇದು ನಾವು ಈ ಪುಸ್ತಕದಿಂದ ಕಲಿಯಬೇಕಾದ ಪಾಠ.

ಕೆಲವು ಪ್ರಸಂಗಗಳನ್ನು ಓದಿ ನಾನು ಎಷ್ಟು ನಕ್ಕಿದ್ದೇನೆ ಎಂದರೆ....ನಿಜವಾಗಿಯೂ ಹೊಟ್ಟೆ ಹುಣ್ಣಾಗಿಹೋಗಿತ್ತು. ಮಧ್ಯ ರಾತ್ರಿ, ಮಟ ಮಟ ಮಧ್ಯಾಹ್ನಗಳನ್ನು ಲೆಕ್ಕಿಸದೇ ಗಹಗಹಿಸಿ ನಕ್ಕು ಮನೆಯವರೆಲ್ಲಾ ಗಾಬರಿಯಾಗುವಂತೆ ಮಾಡಿದ್ದೇನೆ :-)

ಕೆಲವು ಪ್ರಸಂಗಗಳು ನಿಮಗಾಗಿ:

ಬಿ.ಜಿ.ಎಲ್.ಸ್ವಾಮಿ ಅವರ ಪರಿಚಯದ ಬೋರ್ಡು:
ಪಿ.ಚಿ.ಇಲ್ಲ.ಸಾಮಿ, Crop Department.

"ಸಾಹಿತ್ಯವೆಲ್ಲ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಯಿತು ಶಾರ್ !"
"ಮತ್ತೆ ತೋಲ್ಕಾಪ್ಪಿಯರ್ ಹೇಗೆ ಉಳಿದುಬಿಟ್ಟಿತು ?"
"ಅದೇ ಸರ್ ಆ ಕಾವ್ಯದ ಶಕ್ತಿ ! ತಮಿಳರಲ್ಲದ ನಿಮಗೇನು ಗೊತ್ತು ತಮಿಳಿನ ಮಹಿಮೆ !"

"ನಿಮ್ಮ ಸಂಶೋಧನೆಯ ವಿಷಯವೇನು ?"
"ಚಂಗಕಾಲದ ಹುಡುಗಿಯರು"
"ನಿಮ್ಮ ವಿಭಾಗದಲ್ಲಿ ಮತ್ತೊಬ್ಬರೂ ಸಹ ಇದೇ ವಿಷಯದಲ್ಲಿ ಸಂಶೋಧನೆ ಮಾಡುತ್ತಿದ್ದಾರಲ್ಲ ?"
"ಇಲ್ಲ, ಶಾರ್. ಅವರು  ಚಂಗಕಾಲದ ಹುಡುಗಿಯರು ವಿಷಯದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ"
"ಇನ್ನೊಬ್ಬರು..."
"ಅವರ ವಿಷಯ ಚಂಗಕಾಲದ ಮಕ್ಕಳು "
"ಅಲ್ಲ ರಿ...ಮಕ್ಕಳಲ್ಲಿ ಹುಡುಗರು, ಹುಡುಗಿಯರು ಒಟ್ಟಿಗೆ ಸೇರುತ್ತಾರೆ ಅಲ್ಲವೆನ್ರಿ.."
"ಇಲ್ಲಾ ಶಾರ್, ಒಂದರಿಂದ ಹತ್ತು ವರ್ಷದ ವೆರೆಗೆ ಮಾತ್ರ ಮಕ್ಕಳು. ಹತ್ತರಿಂದ ಹದಿನಾರರ ವರೆಗೆ ಹುಡುಗ ಹುಡುಗಿಯರು."

ಇನ್ನಷ್ಟು ನಗಬೇಕಿದ್ದರೆ ಪುಸ್ತಕವನ್ನು ಓದಿ ! :-)

Monday, May 18, 2015

ಉತ್ತರಕ್ಕಾಗಿ ಅಲೆದಾಡಿಸುವ ಶಿಲಾಕುಲ ವಲಸೆ

ಪುಸ್ತಕದ ಶೀರ್ಷಿಕೆ: ಶಿಲಾಕುಲ ವಲಸೆ
ಕರ್ತೃ: ಡಾ|| ಕೆ.ಎನ್.ಗಣೇಶಯ್ಯ
ಪ್ರಕಟಣೆ: ಅಂಕಿತ ಪುಸ್ತಕ, ಬೆಂಗಳೂರು

ಆಂಗ್ಲದ ಡಾವಿಂಚಿ ಕೋಡ್ ನಂತೆ ಕನ್ನಡದಲ್ಲಿ  ಹೊಸ ರೀತಿಯ ಸೈನ್ಸ್ ಫಿಕ್ಷನ್ ಬರಹಗಳ ಹರಿಕಾರರೆಂದೇ ಹೇಳಬಹುದಾದ ಡಾ|| ಕೆ.ಎನ್. ಗಣೇಶಯ್ಯ ಅವರ ಹನ್ನೆರಡನೆಯ ಕೃತಿ ಇದು.

"ಕನಕ ಮುಸುಕು" ಕಾದಂಬರಿಯಿಂದ ಹಿಡಿದು ಶಿಲಾಕುಲ ವಲಸೆಯ ವರೆಗೆ ನಿರೂಪಣಾ ಶೈಲಿಯಲ್ಲಿ ಸಮಾನತೆಯಿದ್ದರೂ,ಪಾತ್ರಗಳು ಪುನರಾವರ್ತನೆಯಾದರೂ,  ಕಥಾವಸ್ತು ಮತ್ತು ಕಥಾ ಹಂದರದ ಆಳ ಮತ್ತು ವಿಸ್ತಾರಗಳು ಬೇರೆಯಾಗಿವೆ.ಕಾದಂಬರಿಗಳ ನಿರೂಪಣೆಯನ್ನು ಮಾಡುವಾಗ ಅವರು ಸತ್ಯಗಳನ್ನು ಪುಷ್ಟೀಕರಿಸಲು ಕೊಡುವ ದಾಖಲೆಗಳು, ಚಿತ್ರಗಳ ಸಾಕ್ಷ್ಯಾಧಾರಗಳು ನಮ್ಮನ್ನು ನಿಬ್ಬೆರಗಾಗಿಸುತ್ತದೆಯಾದರೂ, ಈ ಕಥೆಗಳನ್ನೇ ಸಂಪೂರ್ಣ ಸತ್ಯ ಎಂದು ನಂಬಲಾಗದು, ನಂಬಲೂಬಾರದು. ಚಕ್ರವರ್ತಿ ವಿಕ್ರಮಾದಿತ್ಯ, ಮೈಸೂರಿನ ವೊಡೆಯರ್, ವಿಜಯನಗರ ಸಾಮ್ರಾಜ್ಯಗಳು, ಚಾಣಕ್ಯ, ಬುದ್ಧ, ಅಶ್ವಘೋಷ ನಿಂದ ಹಿಡಿದು, ನೆಹರು ಮತ್ತು ಬಿನ್ ಲಾಡೆನ್ ರ ವರೆಗೂ ಎಲ್ಲರೂ ಕೆ.ಎನ್. ಗಣೇಶಯ್ಯ ನವರ ಕಥಾ ಹಂದರದಲ್ಲಿ ಬಂದು ಹೋಗಿದ್ದಾರೆ. ಈ ಕಾದಂಬರಿಯಲ್ಲಿ ಗಣೇಶಯ್ಯರವರು ಆರ್ಯ-ದ್ರಾವಿಡ ಸಿದ್ಧಾಂತ ಮತ್ತು ದೇವರ ಪರಿಕಲ್ಪನೆಯನ್ನು ತಮ್ಮ ಕಥಾವಸ್ತುವನ್ನಾಗಿಸಿಕೊಂಡಿದ್ದಾರೆ.

ಕಥೆಯನ್ನು ಹೇಳಿದರೆ ಅದನ್ನು ಓದುವ ಸ್ವಾರಸ್ಯವೇ ಹೋಗಿಬಿಡುತ್ತದೆಯಾದ್ದರಿಂದ ಕಥೆಯನ್ನು ಇಲ್ಲಿ ಹೆಚ್ಚು ಹೇಳುವುದಿಲ್ಲ.

ನನ್ನ ಬಗ್ಗೆ ನಾನೇ ಹೇಳಿಕೊಳ್ಳುತ್ತಿಲ್ಲ, ಆದರೆ ಒಂದಂತೂ ನಿಜ,ದೇವರು ಮನುಷ್ಯನ ಕಲ್ಪನೆ ಮತ್ತು ಸೃಷ್ಟಿ ಯಾಕಾಗಿರಬಾರದು, ಮೂರ್ತಿಪೂಜೆ ಮಾನವನ ಅಸ್ತಿತ್ವ ಮತ್ತು ವಿಕಾಸಕ್ಕೆ ಅನಿವಾರ್ಯ ಯಾಕಾಗಿರಬಾರದು ಎಂದು ನಾನು ೨೦೦೯ ರಿಂದ ಯೋಚಿಸುತ್ತಾ ಬಂದಿದ್ದೆ. ಇದಕ್ಕೆ ಕಾರಣ ನಾನು ಎಮ್.ಎಸ್.ಸಿ ಮತ್ತು ಎಮ್.ಫಿಲ್ ಮಾಡುತ್ತಿದ್ದ ಸಮಯದಲ್ಲಿ ಕಂಡ ಕೆಲವು ಪ್ರಯೋಗಸಿದ್ಧ ಸತ್ಯಗಳು, ಮತ್ತು ನಮ್ಮ ಆಲೋಚನಾರೀತಿಯಲ್ಲಿ ಆದ ಮಹತ್ತರವಾದ ಸಕಾರಾತ್ಮಕ ಬದಲಾವಣೆಗಳು.ಆದರೆ, ಸಂಪ್ರದಾಯಸ್ಥರ ಮನೆಯಲ್ಲಿ ವೈಚಾರಿಕ ವಿಭಿನ್ನತೆಯ ಚರ್ಚೆ ಅಪಾಯಕಾರಿಯಾದ್ದರಿಂದ ನನ್ನ ಆಲೋಚನೆಗೆ ಪುಷ್ಟಿ ಕೊಡುವ ಆಧಾರಗಳನ್ನು, ನನ್ನಂತೆ ಯೋಚಿಸುವ ವ್ಯಕ್ತಿಗಳನ್ನು ಮೌನವಾಗಿ ಸಿಕ್ಕಸಿಕ್ಕಲ್ಲೆಲ್ಲಾ  ಹುಡುಕುತ್ತಲೇ ಇದ್ದೆ. ಕೆ.ಎನ್.ಗಣೇಶಯ್ಯ ನವರು ಅದರ ಬಗ್ಗೆ ಕಾದಂಬರಿಯನ್ನೇ ಬರೆದರು .:-)

ನನ್ನ ಆಲೋಚನೆಗಳು ವಿಷ್ಣುವಿನ ದಶಾವತಾರಗಳ ಹಿಂದಿನ ಮರ್ಮ, ಸತ್ಯ, ಅರ್ಥ, ಔಚಿತ್ಯ ಮತ್ತು ಪ್ರಸ್ತುತೆಯ ಸುತ್ತ ಅಷ್ಟೇ ತಿರುಗಾಡುತ್ತಿತ್ತು. ಆದರೆ ಗಣೇಶಯ್ಯರವರು ಮೂಲತಃ ದೇವರ ಕಲ್ಪನೆಯ ಪ್ರಶ್ನೆಯನ್ನೇ ಕೇಳಿ ತಮ್ಮ ಅಗಾಧ ಯೋಚನಾ ಸಾಮರ್ಥ್ಯ ಮತ್ತು ಕಲ್ಪನಾಶಕ್ತಿಯನ್ನು ಮೆರೆದಿದ್ದಾರೆ. ಮತ್ತು ನನ್ನನ್ನು ಕಾಡುತ್ತಿದ್ದ ಕೆಲವು ಮೂಲಭೂತ ಪ್ರಶ್ನೆಗಳಿಗೆ ಸಾಕ್ಷ್ಯಾಧಾರಗಳ ಸಮೇತ ಉತ್ತರವನ್ನು ಒದಗಿಸಿದ್ದಾರೆ. ಅದನ್ನು ಓದಿ ಧನ್ಯಳಾದ ತೃಪ್ತಿ ನನಗಿದೆ. ಮಿಕ್ಕಿದ್ದು ಕಲ್ಪನೆ. ಅದರ ಇತಿಮಿತಿಗಳನ್ನು ನಾನು ಅರಿತಿದ್ದೇನೆ. ಕಥೆಗೆ ಅಷ್ಟು ಕಲ್ಪನೆ ಅವಶ್ಯವೆಂದೂ ಭಾವಿಸುತ್ತೇನೆ.

ಈ ಪುಸ್ತಗಳನ್ನು ಓದಿದ ನಂತರ ಆಂಗ್ಲರು ನಮ್ಮನ್ನು ಎಂತಹ ಬೌದ್ಧಿಕ ದಾಸ್ಯಕ್ಕೆ ತಳ್ಳಿದರು ಎಂದು ಬೇಜಾರಂತೂ ಆಗುತ್ತದೆ. ಜರ್ಮನ್ನರ ಸಂಸ್ಕೃತದ ಪ್ರೀತಿಯ ಹಿಂದೆ ಇರಬಹುದಾದ ನಿಜವಾದ ಉದ್ದೇಶದ ಬಗ್ಗೆ ಅನುಮಾನ ಮೂಡುತ್ತದೆ. ಇಲ್ಲಿ ನಾವು ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ. 

ವೈನಾಡಿನ ಎಡಕಲ್ಲು ಗುಡ್ಡದ ಗುಹೆಯಿಂದ ಆರಂಭವಾಗುವ ಯಾತ್ರೆ ಸರಸ್ವತಿ ನದಿ ಇತ್ತೆಂದು ಹೇಳಲಾಗುವ ಜಾಗದಲ್ಲಿ ಪರ್ಯವಸಾನಗೊಳ್ಳುತ್ತದೆ. ಈ ಕಥಾಯಾತ್ರೆಯಲ್ಲಿ ನಾವು ಶುದ್ಧ ಅಲೆಮಾರಿಗಳಾಬಿಡುವುದಂತೂ ನಿಜ. ವಲಸೆಹೋಗುವ ಮಜವೇ ಬೇರೆ !ಮೊದಲೆ ತಿರುಗಾಟದ ಹುಚ್ಚಿರುವ ನನಗೆ ಈಗಲೇ ಅವರು ಹೇಳಿರುವ ಜಾಗಕ್ಕೆಲ್ಲಾ ಹೋಗಬೇಕೆಂದು ಅನಿಸಿದೆ. ತಾಂತ್ರಿಕ ಕಾರಣಗಳಿಂದ ಸುಮ್ಮನಿರಬೇಕಾದ ಅನಿವಾರ್ಯತೆ ಇದೆ :-)

ಈ ರೀತಿಯ ಪುಸ್ತಕಗಳ ಓದು ನಮ್ಮ logical thinking ಅನ್ನು ಮತ್ತಷ್ಟು ಪುಷ್ಟೀಕರಿಸಬಲ್ಲದು.ವಿಜ್ಞಾನ, ತಂತ್ರಜ್ಞಾನ ಮತ್ತು ಆಧ್ಯಾತ್ಮದ ಜಟಿಲ ಗಂಟುಗಳ ಜಾಲ ಭೇದಿಸಲು ಹೊಸ ಹೊಳಹುಗಳನ್ನು ನೀಡಬಲ್ಲದು.