Wednesday, July 11, 2018

ಸದಾನಂದ ಮತ್ತು ಮಧುವನ

ಪುಸ್ತಕಗಳ ಹೆಸರು: ಸದಾನಂದ ಮತ್ತು ಮಧುವನ

ಲೇಖಕರು: ಎಮ್.ಕೆ.ಇಂದಿರಾ


Sequel ಗಳಾಗಿ ಬರುವ ಪುಸ್ತಗಳ ವಿಮರ್ಶೆಯನ್ನು ಒಟ್ಟಿಗೆ ಮಾಡಿದರೆ ಚೆನ್ನ ಎಂದು ಅನಿಸಿ ಈ ವಿಮರ್ಶೆ ಬರೆಯುತ್ತಿದ್ದೇನೆ.
ಸದಾನಂದ ನಾನು ಓದಿದ ಮೊಟ್ಟ ಮೊದಲ ಸಾಮಾಜಿಕ ಕಾದಂಬರಿ. ಅಲ್ಲಿಯವರೆಗೂ  science fiction ಮತ್ತು  classic , ಈ ಎರಡೇ  genre ಗಳನ್ನು ಓದಿ ಅಭ್ಯಾಸವಾಗಿದ್ದ ನನಗೆ ಎಮ್.ಕೆ. ಇಂದಿರಾ ರವರ ಸದಾನಂದ ಹೊಸ ಲೋಕವನ್ನೇ ತೆರೆಯಿತು. ನಮ್ಮ ಈ ಹೊತ್ತಿಗೆ ಬಳಗ ಈ ಕಾವ್ಯವನ್ನು ಚರ್ಚೆ ಗೆ ಎತ್ತಿಕೊಂಡಾಗ ಬಹಳ ಉಲ್ಲಾಸ ಉತ್ಸಾಹಗಳಿಂದ ಪುಸ್ತಕವನ್ನು ತರಿಸಿಕೊಂಡು ಓದಿದ್ದೆ. ಆದರೆ ಕಾರಣಾಂತರಗಳಿಂದ ಆ ಚರ್ಚೆಗೆ ಹೋಗಲಾಗಿರಲಿಲ್ಲ ಮತ್ತು  ಪುಸ್ತಕದ ಬಗ್ಗೆ ಬ್ಲಾಗಲ್ಲಿ ಏನೂ ಬರೆಯಲೂ ಸಹ ಆಗಿರಲಿಲ್ಲ.  ಮೊನ್ನೆ ನಮ್ಮ ಇನ್ನೊಂದು ಪುಸ್ತಕ ಹಂಚಿಕೆಯ ಗುಂಪಾದ "ಪುಸ್ತಕದ ಹುಳುಗಳು"  ಗುಂಪಿನಲ್ಲಿ ತಿಂಗಳ ಪುಸ್ತಕಗಳ ವಿನಿಮಯದ ಸಮಯದಲ್ಲಿ ಮಧುವನ ಪುಸ್ತಕ ದೊರೆಯಿತು. ಇದು ಸದಾನಂದ ಕಾದಂಬರಿಯ ಮುಂದುವರೆದ ಭಾಗ ಎಂದು ಗೊತ್ತಾದಾಗ ಬಹಳ ಖುಷಿಪಟ್ಟು ತಂದು ಓದಿದೆ. ಹಾಗಾಗಿ ಎರಡು ಪುಸ್ತಕಗಳ ವಿಮರ್ಶೆ ಒಟ್ಟಿಗೆ ಬರೆಯಲು ಇದು ಎರಡನೆಯ ಕಾರಣ.

ಸದಾನಂದ:

ಆಗಿನ ಕಾಲಕ್ಕೆ ವಿಧವಾ ವಿವಾಹ ಎಷ್ಟು ಕಷ್ಟ, ಅಪಘಾತದಿಂದ ಹೆಣ್ಣೊಬ್ಬಳು ಅಂಗವಿಕಲೆಯಾದರೆ ಅವಳ ಜೀವನದ ಸ್ಥಿತಿ ಗತಿ ಏನು ಎಂಬುದನ್ನು ಎತ್ತಿ ತೋರಿಸಲಿಕ್ಕೆ , ಶಾಸ್ತ್ರಕ್ಕಿಂತ ಮನಸ್ಸುಗಳ ಮಿಲನ ಮುಖ್ಯ ಎಂದು ಆಗಿನ ಕಾಲದ ಜನಕ್ಕೆ ಅರಿವು ಮೂಡಿಸಲೆಂದೇ ಈ ಕಾದಂಬರಿಯನ್ನು ಲೇಖಕಿ ರಚಿಸಿದ್ದಾರೆ ಎನ್ನಬಹುದು. ಕಮಲ, ಗೌರಿ, ರಾಜು, ಮೂರ್ತಿ, ರಮಾನಂದ, ಮುಕ್ತಾ, ಜಾನಕಿ, ಎಂಕಟಮ್ಮ, ದುಂಡುಮಲ್ಲಿಗೆ ಎಸ್ಟೇಟು, ಚಿಕ್ಕಮಗಳೂರಿನ ಕಾಫಿ ತೋಟ...ಆಹಾ, ಮಲೆನಾಡಿನ ಆ ವರ್ಣನೆ ಅದ್ಭುತ. ಮೂರ್ತಿ ಮತ್ತು ಗೌರಿಯ ಸುತ್ತ ಆರಂಭವಾಗುವ ಈ ಕಥೆ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳೂತ್ತಾ ಹೋಗುತ್ತದೆ. ರಾಜುವಿನ ಪಾತ್ರ ಇಲ್ಲಿ ನನಗಂತೂ ಬಹಳ ಮೆಚ್ಚುಗೆಯಾದ ಪಾತ್ರ. ಸದಾಕಾಲ ಮನೆಯ ಮತ್ತು ತೋಟದ ಕೆಲಸ ಕಾರ್ಯಗಳನ್ನೂ ಗಮನಿಸಿಕೊಳ್ಳುತ್ತಾ, ತನ್ನ ಅಪ್ಪನಿಗೂ ಆಸರೆಯಾಗಿ ನಿಂತು, ಹಿರಿಯ ಮಗ ಮೂರ್ತಿ ಕೊಟ್ಟ ಪೆಟ್ಟನ್ನು ಚೇತರಿಸಿಕೊಳ್ಳಲಾಗದೇ ತತ್ತರಿಸಿದಾಗ ಮನೆಯ ಊರುಗೋಲಾಗಿ ನಿಂತು, ತನ್ನ ಜವಾಬ್ದಾರಿಗಳನ್ನು ನಿರ್ವಹಿಸಿದ ರೀತಿ, ತನ್ನ ವಿಧವೆ ಅಕ್ಕ ಕಮಲ ಗೆ ಲೈಬ್ರರಿಯಿಂದ ಸದಾನಂದರ ಕಾದಂಬರಿಗಳನ್ನು ಓದಲು ತಂದುಕೊಟ್ಟು, ತಾನೂ ಪುಸ್ತಕಗಳನ್ನು ಓದಿ ಅವರ ಪುಸ್ತಕಗಳಿಂದ ಪ್ರಭಾವಿತನಾಗಿ, ಕಡೆಗೆ ಅವರನ್ನು ಭೇಟಿ ಮಾಡಿ, ಸ್ನೇಹ ಗಳಿಸಿ...ಇನ್ನು ಮುಂದು ಹೇಳಿದರೆ ಕಾದಂಬರಿಯ ಕಥೆಯನ್ನೇ ಬಿಟ್ಟುಕೊಟ್ಟಂಟಾದೀತು. ಒಟ್ಟಿನಲ್ಲಿ, ಮೊದಲ ಕಾದಂಬರಿಯಲ್ಲಿ ರಾಜು-ಗೌರಿಯರ ಪಾತ್ರಕ್ಕೆ ಮೇಲುಗೈ. 

ಕಾದಂಬರಿಯ ಬಹುಪಾಲು  ಸಂಭಾಷಣೆಯಾಗಿ ಸಾಗುವುದು  ಇಲ್ಲಿ ಗಮನಾರ್ಹವಾದ ಅಂಶ . ಲೇಖಕಿ  ಹೇಳಬೇಕಾಗಿರುವುದೆಲ್ಲವನ್ನೂ ಪಾತ್ರಗಳ ನಡೆ-ನುಡಿಗಳ ಮೂಲಕ ಹೇಳಿಸಿರುವುದು ಈ ಕಾದಂಬರಿಯ ಧನಾತ್ಮಕ ಅಂಶಗಳಲ್ಲಿ ಒಂದು. ಕಮಲ ಮತ್ತು ಸದಾನಂದರವರ ವಿವಾಹದೊಂದಿಗೆ ಈ ಸದಾನಂದ ಕಾದಂಬರಿ ಅಂತ್ಯಗೊಳ್ಳುತ್ತದೆ.

ಮಧುವನ:

ಸದಾನಂದ ಕಾದಂಬರಿಯ ಅಂತ್ಯದಿಂದ ಮಧುವನ ಆರಂಭವಾಗುತ್ತದೆ. ಮಧುವನ ಸದಾನಂದರ ಎಸ್ಟೇಟಿನ ಹೆಸರು. ವಿಧುರರಾದ ಸದಾನಂದ ವಿಧವೆ ಕಮಲಾಳನ್ನು ಮದುವೆಯಾಗುವುದರ ಮೂಲಕ ಕಮಲಾಳ ಪ್ರವೇಶ ಮಧುವನಕ್ಕೆ ಆಗುತ್ತದೆ. ವಿಧವಾ ವಿವಾಹವೆಂದರೆ ಹುಬ್ಬೇರಿಸುತ್ತಿದ್ದ ಜನರಿಗೆ ಈ ಕಾದಂಬರಿಯ ಮೂಲಕ ದಿಟ್ಟ ಉತ್ತರ ನೀಡಿದ್ದಾರೆ ಎಂದೇ ಹೇಳಬಹುದು. ಕಮಲಳನ್ನು ಸದಾನಂದ ಬದಲಾಯಿಸುವ ರೀತಿ ನಿಜವಾಗಲೂ ಪ್ರತಿಯೊಬ್ಬ ಹೆಣ್ಣು ಮಗಳಿಗೆ ಪಾಠ. ನಾನು ಇದರಿಂದ ಜೀವನದ ಕೆಲವು ಪರಮ ಸತ್ಯಗ್ಫ಼ಳು ಮತ್ತು ಪ್ರಮುಖ ವಿಚಾರಗಳನ್ನು ಕಲಿತೆ. ಇಂದಿರಾರವರು ಬಹಳ ದೂರದೃಷ್ಟಿಯಿಂದ ಈ ಕಾದಂಬರಿಯನ್ನು ಬರೆದಿದ್ದರು ಎಂದೇ ಹೇಳಬೇಕು. ಆಗಿನ ಕಾಲದಲ್ಲಿ ಜನರು ಹೆದರುತ್ತಿದ್ದ C-Section delivery of a child ಬಗ್ಗೆಯೂ ಸಹ ಇಲ್ಲಿ ಪ್ರಸ್ತಾಪವಿದೆ. ಸಾಮಾಜಿಕ ಕಾದಂಬರಿ ಜನರನ್ನು ಬೇಗ ತಲುಪುತ್ತಿದ್ದವಾದ್ದರಿಂದ ಆ ಮೂಲಕ ಜನರನ್ನು ಹೊಸ ವಿದ್ಯಮಾನಗಳಿಗೆ, ಹೊಸ ವಿಚಾರಧಾರೆಗಳಿಗೆ ಪರಿಚಯಿಸುವ ಮತ್ತು ಜಾಗೃತಗೊಳಿಸುವ ಜಬಾಬ್ದಾರಿಯನ್ನು ಲೇಖಕಿ ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ. 
ಮಧುವನ ಕಾದಂಬರಿಯ ಮತ್ತೊಂದು ಹೈಲೈಟ್ ಸಾಹಿತ್ಯ. ಸಾಹಿತ್ಯ ಚಿಂತನೆಯಲ್ಲಿ ಒಡಮೂಡಿರುವ ಹೊಸ ಹೊಸ ಕಲ್ಪನೆ ಮತ್ತು ವಿಚಾರಧಾರೆಯನ್ನು ಸದಾನಂದ ಪಾತ್ರದ ಮೂಲಕ ಲೇಖಕಿ ಅದ್ಭುತವಾಗಿ ಓದುಗರಿಗೆ ದಾಟಿಸಿದ್ದಾರೆ. ಲೇಖನಗಳನ್ನು ಹೇಗೆ ಬರೆಯಬೇಕು, ಕಥೆ ಹೇಗೆ ಹುಟ್ಟುತ್ತದೆ, ಅದು ಕಾದಂಬರಿ ಯಾವಾಗ ಆಗುತ್ತದೆ, ಎಲ್ಲರೂ ಯಾವಗಲೂ ಕಾದಂಬರಿಗಳಾನ್ನು ಏಕೆ ಬೆರೆಯಲಾಗುವುದಿಲ್ಲ ಎಂಬ ಗಹನವಾದ ಪ್ರಶ್ನೆಗಳಿಗೆ  ಸಮರ್ಥವಾದ ಉತ್ತರವಿದೆ. ಮಧುವನ ಕಾದಂಬರಿ ನನಗೆ ಹಿಡಿಸಿದ್ದು ಇದಕ್ಕೇ. 

ಮಿಕ್ಕಿದ್ದೆಲ್ಲಾ ಮಾಮೂಲು. ಎಲ್ಲ ಕಾದಂಬರಿಗಳಲ್ಲೂ ಇರುವುದು. ಆಗಿನ ಕಾಲದ "ಫಾರ್ವರ್ಡ್ ಥಿಂಕಿಂಗ್" ಕಾದಂಬರಿಗಳು ಎನ್ನಲಡ್ಡಿಯಿಲ್ಲ.




No comments:

Post a Comment