Monday, May 25, 2015

ಹೊಟ್ಟೆ ಹುಣ್ಣಾಗಿಸುವ ತಮಿಳು ತಲೆಗಳು

ಪುಸ್ತಕದ ಹೆಸರು: ತಮಿಳು ತಲೆಗಳ ನಡುವೆ
ಲೇಖಕರು: ಡಾ||.ಬಿ.ಜಿ.ಎಲ್.ಸ್ವಾಮಿ
ಪ್ರಕಾಶಕರು: ಐ.ಬಿ.ಎಚ್.

ನನ್ನ ಹುಟ್ಟು ಹಬ್ಬಕ್ಕೆ ಪತಿದೇವರು Kindle Paperwhite Ebook reader  ಅನ್ನು ಉಡುಗೊರೆಯಾಗಿ ಕೊಟ್ಟಿದ್ದರು. ನಾನು ಅದನ್ನು ಬರೋಬ್ಬರಿ ಎಂಟು ತಿಂಗಳು ಧೂಳು ಹಿಡಿಸಿದ್ದೆ. ಈಗ ಅನಾಯಾಸವಾಗಿ  ನನಗೆ ಸಿಕ್ಕಾಪಟ್ಟೆ ಸಮಯ ದೊರೆತಿರುವ ಶುಭ ಸಂದರ್ಭದಲ್ಲಿ, ಕಿಂಡಲ್ ಮೇಲೆ ಪ್ರಯೋಗಗಗಳನ್ನು ನಡೆಸಲು ಅಂತರಜಾಲದಿಂದ ಕೆಲವು ಕನ್ನಡ ಪುಸ್ತಕಗಳನ್ನು ಡೌನ್ ಲೋಡ್ ಮಾಡಿಕೊಂಡೆ. ಬಹಳ ವರ್ಷಗಳಿಂದ ಹುಡುಕುತ್ತಿದ್ದ  ಈ ಪುಸ್ತಕ ಕೈಗೆ ಸಿಕ್ಕಾಗ ಬಹಳ ಖುಷಿಯಾಯಿತು.

ಬಿ.ಜಿ.ಎಲ್.ಸ್ವಾಮಿಯವರ ಹಾಸ್ಯಪ್ರಜ್ಞೆ ಅಮೋಘವಾದದ್ದು. ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ಅಧ್ಯಾಪಕರಾಗಿದ್ದ ಅವರ ಉದ್ಯೋಗ ರಂಗದ ವಿಶಿಷ್ಟ ಅನುಭವಗಳನ್ನು ಬಹಳ ಸೊಗಸಾಗಿ ಮತ್ತು ಹಾಸ್ಯಮಯವಾಗಿ ಕಾಲೇಜು ರಂಗ ಮತ್ತು ಕಾಲೇಜು ತರಂಗ ಪುಸ್ತಕಗಳಲ್ಲಿ ವರ್ಣಿಸಿದ್ದಾರೆ. ತಮಿಳು ತಲೆಗಳ ನಡುವೆ ಪುಸ್ತಕದಲ್ಲಿ ತಮಿಳರ ಭಾಷಾಭಿಮಾನ, ತಮಿಳ ಸಾಹಿತ್ಯ ಚರಿತ್ರೆಯ ಕುರಿತದ್ದಾಗಿದೆ.ಸ್ವಾಮಿಯವರು ಸಸ್ಯಶಾಸ್ತ್ರ ಪ್ರಾಧ್ಯಾಪಕರಲ್ಲವೇ ? ಅವರಿಗೆ ತಮಿಳು ಚರಿತ್ರೆಯ ಗೊಡವೆಯಾಕೆ ಎಂದು ನೀವು ಕೇಳಬಹುದು. ನನಗೂ ಸಹಜವಾಗಿ ಈ ಪ್ರಶ್ನೆ ಮೂಡಿತು. ಆದರೆ, ಆಶ್ಚರ್ಯಕರ ವಿಷಯವೇನೆಂದರೆ ಸ್ವಾಮಿಯವರು ತಮಿಳು ಚರಿತ್ರೆಯ ಬಗ್ಗೆಯೂ ಸಾಕಷ್ಟು  ಸಂಶೋಧನೆಗಳನ್ನು ನಡೆಸಿ ಪೇಪರ್ ಗಳನ್ನು ಪ್ರಕಟಿಸಿದ್ದಾರೆ. ತಮಿಳರು ಅವರ ಭಾಷಾಭಿಮಾನಕ್ಕೆ ಹೆಸರಾದಂಥವರು. ಅವರ ಸಾಹಿತ್ಯ ಚರಿತ್ರೆಯಲ್ಲಿನ ಕೆಲವು loopholes ಗಳು ಅವರಿಗೂ ತಿಳಿದಿದ್ದರೂ ಸಹ  ಅದನ್ನು ಒಪ್ಪಿಕೊಳ್ಳದಿರುವ ಹಲವಾರು ಪ್ರಸಂಗಗಳನ್ನು ಬಿ.ಜಿ.ಎಲ್.ಸ್ವಾಮಿಯವರು ಅತ್ಯಂತ ಹಾಸ್ಯಮಯವಾಗಿ ವರ್ಣಿಸಿದ್ದಾರೆ. ಅದಕ್ಕೆ ಅವರು " ತಮಿಳೇತರ, ತಮಿಳು ದ್ರೋಹಿ" ಇತ್ಯಾದಿ ಬಿರುದಾಂಕಿತಗಳಿಂದ ನಿಂದಿಸಲ್ಪಟ್ಟಿದ್ದಾರೆ ಸಹ. 

ಇದ್ದ ಸತ್ಯವನ್ನು ಒಪ್ಪಿಕೊಳ್ಳದಿರುವುದು ವೈಜ್ಞಾನಿಕ ಸಂಶೋಧನೆಗಳಲ್ಲಿ ಮಾತ್ರ ನಡೆಯುತ್ತದೆ ಎಂದು ಭಾವಿಸಿದ್ದ ನನಗೆ ಈ ಪುಸ್ತಕ ಕಣ್ತೆರೆಸಿತು. ಚರಿತ್ರೆಯ ಅಧ್ಯಯನದಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಉಪಯೋಗಿಸಿ ಕಂಡುಹಿಡಿದ ಸತ್ಯಗಳನ್ನು ಚರಿತ್ರಕಾರರು ಒಪ್ಪಿಕೊಳ್ಳರು ಎಂಬ ಸತ್ಯದ ಅರಿವಾಯಿತು.ಇದು ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಿಸಿರುವ ಒಂದು ಪಿಡುಗು ಎಂದು ತಿಳಿಯಿತು. ಪ್ರಬಲ ವಿರೋಧ ಮತ್ತು ಬಹಿಷ್ಕಾರದ ನಡುವೆಯೂ ಬಿ.ಜಿ.ಎಲ್.ಸ್ವಾಮಿಯವರು ಸತ್ಯದ ಪ್ರತಿಪಾದನೆಯಿಂದ ಹಿಂಜರಿಯದಿರುವುದು ಅವರ ವ್ಯಕ್ತಿತ್ವ ಘನತೆ, ಸತ್ಯಕ್ಕೆ ಅವರ ನಿಷ್ಟೆ ಮತ್ತು ಬದ್ಧತೆಯನ್ನು ತೋರಿಸುತ್ತದೆ. ಇದು ನಾವು ಈ ಪುಸ್ತಕದಿಂದ ಕಲಿಯಬೇಕಾದ ಪಾಠ.

ಕೆಲವು ಪ್ರಸಂಗಗಳನ್ನು ಓದಿ ನಾನು ಎಷ್ಟು ನಕ್ಕಿದ್ದೇನೆ ಎಂದರೆ....ನಿಜವಾಗಿಯೂ ಹೊಟ್ಟೆ ಹುಣ್ಣಾಗಿಹೋಗಿತ್ತು. ಮಧ್ಯ ರಾತ್ರಿ, ಮಟ ಮಟ ಮಧ್ಯಾಹ್ನಗಳನ್ನು ಲೆಕ್ಕಿಸದೇ ಗಹಗಹಿಸಿ ನಕ್ಕು ಮನೆಯವರೆಲ್ಲಾ ಗಾಬರಿಯಾಗುವಂತೆ ಮಾಡಿದ್ದೇನೆ :-)

ಕೆಲವು ಪ್ರಸಂಗಗಳು ನಿಮಗಾಗಿ:

ಬಿ.ಜಿ.ಎಲ್.ಸ್ವಾಮಿ ಅವರ ಪರಿಚಯದ ಬೋರ್ಡು:
ಪಿ.ಚಿ.ಇಲ್ಲ.ಸಾಮಿ, Crop Department.

"ಸಾಹಿತ್ಯವೆಲ್ಲ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಯಿತು ಶಾರ್ !"
"ಮತ್ತೆ ತೋಲ್ಕಾಪ್ಪಿಯರ್ ಹೇಗೆ ಉಳಿದುಬಿಟ್ಟಿತು ?"
"ಅದೇ ಸರ್ ಆ ಕಾವ್ಯದ ಶಕ್ತಿ ! ತಮಿಳರಲ್ಲದ ನಿಮಗೇನು ಗೊತ್ತು ತಮಿಳಿನ ಮಹಿಮೆ !"

"ನಿಮ್ಮ ಸಂಶೋಧನೆಯ ವಿಷಯವೇನು ?"
"ಚಂಗಕಾಲದ ಹುಡುಗಿಯರು"
"ನಿಮ್ಮ ವಿಭಾಗದಲ್ಲಿ ಮತ್ತೊಬ್ಬರೂ ಸಹ ಇದೇ ವಿಷಯದಲ್ಲಿ ಸಂಶೋಧನೆ ಮಾಡುತ್ತಿದ್ದಾರಲ್ಲ ?"
"ಇಲ್ಲ, ಶಾರ್. ಅವರು  ಚಂಗಕಾಲದ ಹುಡುಗಿಯರು ವಿಷಯದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ"
"ಇನ್ನೊಬ್ಬರು..."
"ಅವರ ವಿಷಯ ಚಂಗಕಾಲದ ಮಕ್ಕಳು "
"ಅಲ್ಲ ರಿ...ಮಕ್ಕಳಲ್ಲಿ ಹುಡುಗರು, ಹುಡುಗಿಯರು ಒಟ್ಟಿಗೆ ಸೇರುತ್ತಾರೆ ಅಲ್ಲವೆನ್ರಿ.."
"ಇಲ್ಲಾ ಶಾರ್, ಒಂದರಿಂದ ಹತ್ತು ವರ್ಷದ ವೆರೆಗೆ ಮಾತ್ರ ಮಕ್ಕಳು. ಹತ್ತರಿಂದ ಹದಿನಾರರ ವರೆಗೆ ಹುಡುಗ ಹುಡುಗಿಯರು."

ಇನ್ನಷ್ಟು ನಗಬೇಕಿದ್ದರೆ ಪುಸ್ತಕವನ್ನು ಓದಿ ! :-)

1 comment: