Thursday, April 23, 2020

ತಬ್ಬಲಿಯು ನೀನಾದೆ ಮಗನೆ

ಎಷ್ಟೋ ವರುಷಗಳ ಹಿಂದೆ ಕೊಂಡ ಪುಸ್ತಕಗಳನ್ನು ಈ ಲಾಕ್ ಡೌನ್ ಸಮಯದಲ್ಲಿ ಓದಲು ಸಾಧ್ಯವಾಗುತ್ತಿದೆ. ಅಂತಹುದೇ ಒಂದು ಪುಸ್ತಕ "ತಬ್ಬಲಿಯು ನೀನಾದೆ ಮಗನೆ". ಈ ಕಾದಂಬರಿಯ ಲೇಖಕರು ಡಾಕ್ಟರ್ ಎಸ್ ಎಲ್ ಭೈರಪ್ಪ ಅವರು .ಗೋಪಾಲನೆ,ಗೋ ಸಂರಕ್ಷಣೆ ಮತ್ತು ಗೋಪಾಲಕರ ಜೀವನಚರಿತ್ರೆ ಈ ಕಾದಂಬರಿಯ ಮೂಲವಸ್ತು. ತಬ್ಬಲಿಯು ನೀನಾದೆ ಮಗನೆ ಕಾದಂಬರಿಯು ಬಿ ವಿ ಕಾರಂತರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಮೂಡಿ ಬಂದಿದೆ. ಕಾದಂಬರಿ ಓದದೇ ಚಲನಚಿತ್ರವನ್ನು ನೋಡಬಾರದು ಎಂಬ ಉದ್ದೇಶದಿಂದ ಮೊದಲು ಕಾದಂಬರಿಯನ್ನು ಓದಿ ಆನಂತರ ಚಲನಚಿತ್ರವನ್ನ ನೋಡಿದೆ .ಕಾದಂಬರಿಗೂ ಮತ್ತು ಚಲನಚಿತ್ರಕ್ಕೂ ಬಹಳ ವ್ಯತ್ಯಾಸಗಳು ಕಂಡುಬಂದಿದ್ದು ಕಾದಂಬರಿಯೇ ಚಲನಚಿತ್ರಕ್ಕಿಂತ ಬಹಳ ಉತ್ತಮವಾಗಿದೆ ಎಂಬುದು ನನ್ನ ಅನಿಸಿಕೆ. ಭಾರತ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ಗೋವಿನ ಬಗೆಗಿನ ನಂಬಿಕೆಗಳು ಬಹಳ ವಿಭಿನ್ನವಾಗಿದೆ. ಭಾರತದಲ್ಲಿ ಗೋವು ಮಾತೃಸ್ಥಾನದಲ್ಲಿದ್ದು ಪೂಜನೀಯವಾಗಿದ್ದರೆ, ಪಾಶ್ಚಾತ್ಯ ದೇಶಗಳಲ್ಲಿ ಅದು ಕೇವಲ ಒಂದು ಪ್ರಾಣಿಯಾಗಿಯೂ ಮತ್ತು ಮನುಷ್ಯನಿಗೆ ಆಹಾರವಾಗಿಯೂ ಪರಿಗಣಿಸಲ್ಪಡುತ್ತದೆ. "ಧರಣಿ ಮಂಡಲ ಮಧ್ಯದೊಳಗೆ " ಎಂಬ ಗೋವಿನ ಹಾಡಿನಲ್ಲಿ ಉಲ್ಲೇಖಿಸಲ್ಪಡುವ ಕಾಳಿಂಗ ಎಂಬ ಹೆಸರನ್ನೇ ಹಿಡಿದು ಭೈರಪ್ಪ ಅವರು ಕಥೆಯನ್ನು ಪ್ರಾರಂಭಿಸುತ್ತಾರೆ. ಕಾಳಿಂಗನ ವಂಶ ಗೋಪಾಲಕರ ವಂಶವಾಗಿದ್ದು , ಅವರ ದೊಡ್ಡಿಯಲ್ಲಿ ಪುಣ್ಯಕೋಟಿ ತಳಿಯ ಹಸುಗಳಿರುತ್ತವೆ. ತಾತ ಮೊಮ್ಮಕ್ಕಳು ಒಂದೇ ಹೆಸರಿನಿಂದ ಕರೆಯಲ್ಪಡುತ್ತಾರೆ . ದೊಡ್ಡ ಕಾಳಿಂಗನನ್ನು ಗೌಡಜ್ಜ ಎಂದು ಕರೆದು, ಮೊಮ್ಮಗ ಕಾಳಿಂಗನನ್ನು ಪುಟ್ಟ ಕಾಳಿಂಗ ಮತ್ತು ಆ ನಂತರ ಕಾಳಿಂಗ ಎಂದು ಕರೆಯಲ್ಪಡುತ್ತಾ , ತಲೆಮಾರಿನಲ್ಲಿ ಆಗುವ ಬದಲಾವಣೆಗಳನ್ನು ಬಹಳ ಸೂಚ್ಯವಾಗಿ ಭೈರಪ್ಪನವರು ತೋರಿಸುತ್ತಾ ಹೋಗುತ್ತಾರೆ. ಜೈಮಿನಿಯನ್ನು ಓದಬಲ್ಲ ಗೌಡಜ್ಜಊರಿಗೆ ಹಿರಿಯ ಮತ್ತು ಗೋಪಾಲಕರಲ್ಲಿ ಬಹಳ ಪ್ರಮುಖ. ಎಕರೆಗಟ್ಟಲೆ ಜಮೀನು ಮತ್ತು ಗೋಮಾಳ ವನ್ನು ಹೊಂದಿದ ಅವನು ಗೋವನ್ನು ತನ್ನ ತಾಯಿ ಅಕ್ಕ ತಂಗಿ ಬಂಧು ಬಾಂಧವರಂತೆ ಭಾವಿಸಿರುತ್ತಾನೆ. ಒಂದು ದುರದೃಷ್ಟಕರ ಘಟನೆಯಲ್ಲಿ ತನ್ನ ಮಗನನ್ನು ಕಳೆದುಕೊಳ್ಳುವ ಗೌಡ ತನ್ನ ಮೊಮ್ಮಗನನ್ನು ಬಹಳ ಪ್ರೀತಿಯಿಂದ ಬೆಳೆಸಿ ಅವನು ಇನ್ನೂ ಹೆಚ್ಚು ಓದಲಿ ಎಂಬ ಏಕೈಕ ಆಸೆಯಿಂದ ಮೊಮ್ಮಗನಿಗೆ ಶಾಲೆಯಲ್ಲಿ ಇಂಗ್ಲಿಷನ್ನು ಓದಿಸುತ್ತಾನೆ. ಊರ ಜೋಯಿಸರ ಮಗ ವೆಂಕಟರಮಣ ಕೂಡ ಸಂಸ್ಕೃತವನ್ನು ಓದಲು ಮೈಸೂರಿಗೆ ಹೋದ ನಂತರ ತನ್ನ ಮೊಮ್ಮಗನನ್ನು ಸ ಕಳಿಸಲು ಗೌಡ ಬಹಳ ಕಷ್ಟದಿಂದ ಒಪ್ಪಿಕೊಳ್ಳುತ್ತಾನೆ. ಆದರೆ ಅಲ್ಲಿ ಹೋದಮೇಲೆ ಮೊಮ್ಮಗ ಪುಟ್ಟ ಕಾಳಿಂಗನ ಯೋಚನೆ ಮತ್ತು ಬದುಕಿನ ಶೈಲಿ ಬದಲಾಗಿ ಅವನು ಉನ್ನತ ವ್ಯಾಸಂಗಕ್ಕಾಗಿ ಅಮೇರಿಕೆಗೆ ಹೋಗುತ್ತಾನೆ. ಇತ್ತ ಊರಿನಲ್ಲಿ ಹಲವಾರು ಬದಲಾವಣೆಗಳು ಆಗಿ ಗೌಡಜ್ಜ ತನ್ನ ಗೋಮಾಳವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಮಧ್ಯದ ದಾರಿಯನ್ನು ಹುಡುಕಿ ಗೋಮಾಳವನ್ನು ಸಂರಕ್ಷಿಸುವಲ್ಲಿ ಗೌಡ ತಕ್ಕಮಟ್ಟಿಗೆ ಯಶಸ್ವಿಯಾಗುತ್ತಾನೆ. ತನ್ನ ದೊಡ್ಡಿಯಲ್ಲಿ ಪುಣ್ಯಕೋಟಿ ತಳಿಯ ಹಸು ಇರುವುದರಿಂದ ಪುಣ್ಯಕೋಟಿಗೆ ಒಂದು ದೇವಸ್ಥಾನವನ್ನು ಕಟ್ಟಿಸಬೇಕು ಎಂಬ ಉದ್ದೇಶದಿಂದ ಬೆಟ್ಟದ ಮೇಲೆ ಪುಣ್ಯಕೋಟಿ ಮತ್ತು ಅರ್ಬುದ ಎಂಬ ವ್ಯಾಘ್ರ ಇತ್ತು ಎಂದು ನಂಬಲಾದ ಒಂದು ಗುಹೆಯ ಬಳಿ ಪುಣ್ಯಕೋಟಿ ದೇವಸ್ಥಾನವನ್ನು ಕಟ್ಟಿಸಬೇಕೆಂದು ಅವನು ಸಂಕಲ್ಪ ಮಾಡುತ್ತಾನೆ. ಊರವರೆಲ್ಲರ ಸಹಾಯದಿಂದ ಒಂದು ದೇವಸ್ಥಾನ ಮತ್ತು ಒಂದು ಕಲ್ಯಾಣಿ ಏರ್ಪಟ್ಟು ಪ್ರಾಣಪ್ರತಿಷ್ಠಾಪನೆ ಎಲ್ಲವೂ ಸಹ ಆಗುತ್ತದೆ.ಇದೆಲ್ಲಾ ಆದರೂ ಕಾಳಿಂಗ ಅಮೇರಿಕೆಯಿಂದ ಬಂದೇ ಇರುವುದಿಲ್ಲ .ತಾನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದ ಗೋಮಾಳವನ್ನು ಕಡೆಗೂ ಸರ್ಕಾರದವರು ಪಡೆದುಕೊಂಡು ಅದನ್ನು ಇಬ್ಭಾಗವಾಗಿಸಿ ತನ್ನ ಮಗ ಹಾಗೂ ಒಂದು ಪುಣ್ಯಕೋಟಿ ಹಸುವಿನ ಸಮಾಧಿಯನ್ನು ಸಹ ಕೆಡಿಸಿ ಬಿಟ್ಟು ಅಲ್ಲೆ ರಸ್ತೆಯನ್ನು ಹಾಕುವುದಾಗಿ ಆದೇಶ ಬಂದಾಗ ದುಃಖವನ್ನು ತಡೆಯಲಾರದೆ ಗೌಡಜ್ಜನ ಹೆಂಡತಿ ಸತ್ತು ಹೋಗುತ್ತಾಳೆ. ಗೋಮಾಳ ಇಬ್ಭಾಗವಾದ ನಂತರ ಆ ದುಃಖವನ್ನು ತಡೆಯಲಾರದೆ ಗೌಡಜ್ಜ ಸಹ ತೀರಿ ಹೋಗುತ್ತಾನೆ.

 ಗೌಡ ತೀರಿಹೋದ ಎಂದು ಟೆಲಿಗ್ರಾಂ ಮೂಲಕ ವಿಷಯ ತಿಳಿದುಕೊಳ್ಳುವ ಪುಟ್ಟ ಕಾಳಿಂಗ ಅವನ ತಿಥಿಯ ಸಮಯಕ್ಕೆ ಊರು ತಲಪುತ್ತಾನೆ. ತಾನು ತಲೆಬೋಳಿಸಿಕೊಂಡು ತಿಥಿ ಮಾಡುವುದಿಲ್ಲವೆಂದು ಹಠ ಮಾಡುವ ಕಾಳಿಂಗ ತಾನು ಬದಲಾಗಿದ್ದಾನೆ ಎಂಬುದ ಬಂದ ತಕ್ಷಣವೇ ಊರಿಗೆ ತೋರಿಸಿಬಿಡುತ್ತಾನೆ. ಗೋಮಾಳದ ಜಾಗದ ಬದಲಾಗಿ ಬೆಟ್ಟದ ತಪ್ಪಲಿನ ಜಮೀನೆಲ್ಲವನ್ನು ಪಡೆದುಕೊಳ್ಳುವ ಪುಟ್ಟ ಕಾಳಿಂಗ ಒಂದು ಫಾರ್ಮ್ ಹೌಸ್ ಅನ್ನು ಕಟ್ಟಿಕೊಂಡು ಹಸುಗಳನ್ನೆಲ್ಲಾ ಒಂದು ಹೊಸದೊಡ್ಡಿಯಲ್ಲಿ ಸೇರಿಸುತ್ತ ತನ್ನ ಮೂಗಿ ತಾಯಿ ತಾಯವ್ವನ ಕೋಪಕ್ಕೆ ಗುರಿಯಾಗುತ್ತಾನೆ. ಯಾರಿಗೂ ತಿಳಿಸದೆ ಅಮೇರಿಕೆಯಲ್ಲಿ ಅಮೇರಿಕನ್ ಒಬ್ಬಳನ್ನು ಮದುವೆಯಾಗಿರುತ್ತಾನೆ. ಅವನಿಗೆ ಎಂಟು ತಿಂಗಳ ಒಂದು ಮಗುವು ಸಹ ಇರುತ್ತದೆ. ತನ್ನ ಗೆಳೆಯ ವೆಂಕಟರಮಣ ಈ ಊರಿನ ಅರ್ಚಕನಾಗಿರುತ್ತಾನೆ. ಅವನಿಗೆ ಈ ವಿಷಯವನ್ನು ತಿಳಿಸುವ ಪುಟ್ಟ ಕಾಳಿಂಗ ಹಲವಾರು ಘಟನೆಗಳ ಮೂಲಕ ವೆಂಕಟರಮಣನ ಕೋಪಕ್ಕೂ ಸಹ ಗುರಿಯಾಗುತ್ತಾನೆ . ಕಾಳಿಂಗನ ಹೆಂಡತಿ ಹಿಲ್ಡಾ ಳ ಆಗಮನವಾದ ನಂತರ ಪರಿಸ್ಥಿತಿ ಬಹಳ ಬದಲಾಗುತ್ತದೆ. ಅವರ ಹೊಸ ಫಾರ್ಮ್ಹೌಸ್ನಲ್ಲಿ ಜಮೀಲ ಎಂಬ ಮುಸ್ಲಿಮ್ ಕುಟುಂಬ ವಾಸವಾಗಿ ಕೋಳಿ ಸಾಕಾಣಿಕೆಯಲ್ಲಿ ನಿರತವಾಗಿರುತ್ತದೆ. ಇಲ್ಲಿ ಬಂದ ಮೇಲೆ ಹಿಲ್ಡಾ ವೆಂಕಟರಮಣನ ಸ್ನೇಹವನ್ನು ಬಯಸಲು ಹೋಗಿ ಅಪಾರ ಅವಮಾನಗಳಿಗೆ ತುತ್ತಾಗುತ್ತಾಳೆ .ಅಷ್ಟು ಹೊತ್ತಿಗೆ ಈಗ ಮತ್ತೆ ಗರ್ಭಿಣಿಯಾಗಿರುತ್ತಾಳೆ .ಐದು ತಿಂಗಳ ಬಸರಿ ಒಂದು ದಿನ ವೆಂಕಟರಮಣನಿಂದ ಅವಮಾನಕ್ಕೊಳಗಾಗಿ ಇವರು ಪೂಜಿಸುವ ಪುಣ್ಯಕೋಟಿ ಹಸುವಿನಲ್ಲಿ ನಿಜವಾಗಿಯೂ ಮೂವತ್ಮೂರು ಕೋಟಿ ದೇವತೆಗಳು ಇದ್ದಾರೆಯೇ ಎಂದು ಲೇವಡಿ ಮಾಡುತ್ತಾ ಪುಣ್ಯಕೋಟಿ ಹಸುವೊಂದನ್ನು ತಿನ್ನಬೇಕೆಂದು ಜಮೀಲನಿಗೆ ಹೇಳುತ್ತಾಳೆ. ಈ ಮಾತನ್ನು ಕೇಳಿ ಹೆದರುವ ಜಮೀಲ ಈ ಕೆಲಸವನ್ನು ತಾನು ಮಾಡಲಾರ ಎಂದು ತಿಳಿಸುತ್ತಾನೆ . ಹಿಲ್ಡಾ ಬಹಳ ಬಲವಂತಮಾಡಿ ಜಮೀಲನ ಕೈಲಿ ಗೋಹತ್ಯೆ ಮಾಡಿಸುತ್ತಾಳೆ. ಆದರೆ ಅವಳು ಪುಣ್ಯಕೋಟಿಯ ಮಾಂಸವನ್ನು ತಿನ್ನಲಾರಳಾಗುತ್ತಾಳೆ. ಅದೇ ರಾತ್ರಿ ಕಾಳಿಂಗನಿಗೆ ಗೋಮಾಂಸವನ್ನು ಬಡಿಸುತ್ತಾ ತಾನು ಪುಣ್ಯಕೋಟಿಯನ್ನು ಸಾಯಿಸಿದ್ದೇನೆ ಎಂಬ ವಿಷಯವನ್ನು ಮುಚ್ಚಿಟ್ಟು ಕಾಳಿಂಗನ ಮನಸ್ಸನ್ನು ಬೇರೆಡೆ ಹರಿಸುವಲ್ಲಿ ಅವಳು ಯಶಸ್ವಿಯಾಗುತ್ತಾಳೆ. ಆದರೆ ಊರಿನ ಜನರಿಗೆ ಈ ವಿಷಯ ಗೊತ್ತಾಗಿ ದೊಡ್ಡ ರಾದ್ಧಾಂತ ನಡೆಯುತ್ತದೆ ಪುಣ್ಯಕೋಟಿಯನ್ನು ಸಾಯಿಸಿದ್ದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಂಡ ಕಾಳಿಂಗ ಹಿಲ್ಡಾ ದೃಷ್ಟಿಯಲ್ಲಿ ಬಹಳ ಕೇವಲವಾಗಿ ಬಿಡುತ್ತಾನೆ . ಗಂಡಹೆಂಡತಿಯರಿಗೆ ಘೋರವಾದ ಜಗಳವಾಗುತ್ತದೆ ಮುಂದೇನಾಯಿತೆಂದು ತಿಳಿಯಲೇ ಪುಸ್ತಕವನ್ನು ಓದಿ.

 ಈ ಕಾದಂಬರಿಯಲ್ಲಿ ನಮ್ಮನ್ನು ಬಹಳವಾಗಿ ಕಾಡುವ ಪಾತ್ರ ತಾಯವ್ವ ನದು . ಅವಳು ಮೂಕಿ ಯಾಗಿದ್ದರೂ ಸಹ ಅವಳ ಪಾತ್ರ ಪೋಷಣೆಯನ್ನು ಭೈರಪ್ಪ ಬಹಳ ಮನೋಜ್ಞವಾಗಿ ಮಾಡಿದ್ದಾರೆ. ತಾಯವ್ವನ ಪಾತ್ರದ ನಂತರ ನಮ್ಮನ್ನು ಮತ್ತಷ್ಟು ಕಾಡುವ ಪಾತ್ರಗಳು ಗೌಡಜ್ಜ, ಹಿರಿಯ ಮತ್ತು ಕಿರಿಯ ಜೋಯಿಸರದ್ದು. ಇಂತಹ ಅದ್ಭುತ ಕಾದಂಬರಿಯನ್ನು ಬರೆದ ಭೈರಪ್ಪನವರಿಗೆ ಎಷ್ಟು ಅಭಿನಂದನೆಗಳನ್ನು ಹೇಳಿದರೂ ಸಾಲದು. ಗೋಸಂರಕ್ಷಣೆಯ ಹೆಸರಿನಲ್ಲಿ ಕರುವಿಗೆ ಹಾಲನ್ನು ಬಿಡದೆ ಎಲ್ಲ ಹಾಲನ್ನು ಹೀರುವ ಪ್ರಯತ್ನ ಮಾಡುವ ಹಿಲ್ಡಾ ಮತ್ತು ಕಾಳಿಂಗ ಕಡೆಗೆ ತನ್ನ ಮಗುವಿಗೆ ಹಾಲನ್ನು ಕುಡಿಸಲು ಆಗದೇ ಒದ್ದಾಡುವ ರೀತಿ ಎಂತಹವರ ಕಣ್ಣಲ್ಲೂ ನೀರು ತರಿಸುತ್ತದೆ. ಕಾಳಿಂಗ ಕಡೆಗೆ ಹೇಗೆ ತಬ್ಬಲಿಯಾಗುತ್ತಾನೆ ಎಂಬುದನ್ನು ಓದಿಯೇ ತಿಳಿಯಬೇಕು.

ಪರ್ವತದಲ್ಲಿ ಪವಾಡ

ನಾನು ಈವರೆಗೂ ಆಂಗ್ಲದಿಂದ ಕನ್ನಡಕ್ಕೆ ಅನುವಾದವಾಗಿರುವ ಪುಸ್ತಕಗಳನ್ನು ಓದಿರಲಿಲ್ಲ.ಇದಕ್ಕೆ ಕಾರಣ ಇಷ್ಟೆ.ಪುಸ್ತಕದ ನಿಜವಾದ ರುಚಿಯು ಮೂಲದಲ್ಲಿಯೇ ಇರುತ್ತದೆ ಎಂದು ನನ್ನ ನಂಬಿಕೆ . ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಪುಸ್ತಕವು ಅನುವಾದಗೊಳ್ಳುವ ಆಗ ಅದು ತನ್ನ ಶೈಲಿ ಮತ್ತು ಸ್ವಾದವನ್ನು ಕಳೆದುಕೊಳ್ಳುತ್ತದೆ ಎಂಬುದು ನನ್ನ ಅನಿಸಿಕೆಯಾಗಿತ್ತು. ಸಂಸ್ಕೃತದಿಂದ ಆಂಗ್ಲಕ್ಕೆ ಮತ್ತು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಗೊಂಡ ಪುಸ್ತಕಗಳಲ್ಲಿ ಈ ವಿದ್ಯಮಾನವು ಸಾಕಷ್ಟು ಕಂಡಿತ್ತು.ಹಾಗಾಗಿ ನಾನು ಎಂದಿಗೂ ಆಂಗ್ಲದಿಂದ ಅನುವಾದವಾಗಿರುವ ಯಾವುದೇ ಪುಸ್ತಕವನ್ನು ಓದಬಾರದೆಂದು ನಿರ್ಧರಿಸಿ ಮೂಲ ಪುಸ್ತಕಗಳನ್ನು ಓದಲು ಬಯಸುತ್ತಿದ್ದೆ.ಸಂಯುಕ್ತಾ ಪುಲಿಗಲ್ ಅವರು ಅನುವಾದಿಸಿರುವ "ಪರ್ವತದಲ್ಲಿ ಪವಾಡ" ಪುಸ್ತಕವನ್ನು ಓದಿದಮೇಲೆ ಅನುವಾದ ಸಾಹಿತ್ಯದ ಬಗೆಗಿನ ನನ್ನ ಅನಿಸಿಕೆ ಸಂಪೂರ್ಣವಾಗಿ ಬದಲಾಗಿದೆ.ಈ ಪುಸ್ತಕವನ್ನು ಸಂಯುಕ್ತ ನನಗೆ ಮೂರು ವರ್ಷದ ಹಿಂದೆ ಕೊಟ್ಟಿದ್ದರಾದರೂ ನಾನು ನನ್ನದೇ ಆದ ಕಾರಣಗಳಿಂದ ಈ ಪುಸ್ತಕವನ್ನು ಓದಲಾಗಿರಲಿಲ್ಲ. ಈ ಲಾಕ್ ಡೌನ್ ಇಂದಾಗಿ  ಹಲವಾರು ಪುಸ್ತಕಗಳನ್ನು ಓದಲು ಅವಕಾಶ ಸಿಕ್ಕಿತು . ಪರ್ವತದಲ್ಲಿ ಪವಾಡ ಪುಸ್ತಕವನ್ನು ಓದುವ ಮುಂಚೆಯೇ ನಾನು ಸಂಯುಕ್ತ ರವರ ಲ್ಯಾಪ್ ಟಾಪ್ ಪರದೆಯಾಚೆಗೆ ಎಂಬ ಪುಸ್ತಕವನ್ನು ಓದಿದೆ.ಅವರ ಸುಲಲಿತವಾದ ಬರಹದ ಶೈಲಿ ಬಹಳ ಇಷ್ಟವಾಗಿತ್ತು.ಅವರ ಸ್ವಂತ ಬರಹಗಳು ಇಷ್ಟು ಹೃದ್ಯವಾಗಿರುವಾಗ ಅವರ ಅನುವಾದಶೈಲಿ ಹೇಗಿರಬಹುದು ಎಂಬ ಕುತೂಹಲದೊಂದಿಗೆ ಈ ಪುಸ್ತಕವನ್ನು ನಾನು ಓದಲು ಪ್ರಾರಂಭಿಸಿದೆ . ನಮ್ಮ ದೇಶದಲ್ಲಿ ಆ್ಯಂಡಿಸ್ ಪರ್ವತವಿದ್ದಿದ್ದರೆ ಮತ್ತು ಕನ್ನಡಿಗನೊಬ್ಬ ಏನಾದರೂ ಆ ಪರ್ವತದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ಅವನ ಮನಸ್ಸಿನಲ್ಲಿ ಯಾವ ರೀತಿಯ ತಳಮಳಗಳು ಉಂಟಾಗುತ್ತಿದ್ದವೋ, ಅಂತೆಯೇ ಇದೆ ಸಂಯುಕ್ತಾ ರವರ ಅನುವಾದ.ಎಲ್ಲಿಯೂ ಸಹ ಇದು ಅನ್ಯದೇಶೀಯ ಪುಸ್ತಕದ ಅನುವಾದ ಎಂದು ಅನಿಸದ ಹಾಗೆ ಅವರು ಆಪ್ತವಾಗಿ ಪುಸ್ತಕವನ್ನು ಕನ್ನಡೀಕರಿಸಿದ್ದಾರೆ.ಈ ಬೃಹತ್ ಸಾಹಸಕ್ಕೆ ಅವರು ಖಂಡಿತಾ ಅಭಿನಂದನಾರ್ಹರು .

ಹಿಮಾಲಯದ ಹಿಮಪಾತಗಳಲ್ಲಿ ಕಳೆದು ಹೋದ ಮತ್ತು ಮರಣ ಹೊಂದಿದ ಎಷ್ಟೋ ಜನರ ಬಗ್ಗೆ ನಾವು ಕೇಳಿದ್ದೇವೆ, ಓದಿದ್ದೇವೆ.ಆದರೆ ದೂರದ ದಕ್ಷಿಣ ಅಮೇರಿಕದಲ್ಲಿ ,ಜಗತ್ತಿನ ಅತ್ಯಂತ ಉದ್ದನೆಯ ಪರ್ವತ ಶ್ರೇಣಿಯಾದ ಆ್ಯಂಡಿಸ್ ಶಿಖರಗಳಲ್ಲಿ ವಿಮಾನ ಅಪಘಾತದಿಂದ ಸಿಕ್ಕಿಹಾಕಿಕೊಂಡ ಅವರ ಕಥೆಯನ್ನು ನಾನಂತೂ ಕೇಳಿರಲೂ ಇಲ್ಲ ಓದಿಯೂ ಇರಲಿಲ್ಲ.ಕೈಯಲ್ಲಿ ಹಿಡಿದ ತಕ್ಷಣ ಕೆಳಗಿಡಲಾಗದಂತೆ ಓದಿಸಿಕೊಂಡು ಹೋಯಿತು ಈ ಪುಸ್ತಕ.ನ್ಯಾಂಡೋ ಪರಾಡೋ ಅವರು ಆಂಡಿಸ್ ಪರ್ವತಗಳ ಮಧ್ಯದಲ್ಲಿ ವಿಮಾನ ಅಪಘಾತದಿಂದಾಗಿ   ಸಿಕ್ಕುಹಾಕಿಕೊಂಡು ಪಟ್ಟ ಪಾಡು ಎಷ್ಟು ಕಷ್ಟಕರವಾದದ್ದು ಎಂದು ಓದುತ್ತಾ ಹೋದರೆ, ನಾವು ಪಟ್ಟ ಮತ್ತು ಪಡುತ್ತಿರುವ ಕಷ್ಟಗಳೆಲ್ಲವೂ ತೃಣಸಮಾನ ಎಂದೆನಿಸಿ ನಮ್ಮ ಬದುಕಿನ ದೃಷ್ಟಿಕೋನವೇ ಬದಲಾಗುತ್ತದೆ. ನಲವತ್ತು ದಿನದ ಗೃಹಬಂಧನ ವನ್ನೇ ದೊಡ್ಡ ವಿಷಯವನ್ನಾಗಿಸುವ ನಾವು ಎಪ್ಪತ್ತೆರಡು ದಿನಗಳ ಆ ಘೋರ ಪರದಾಟವನ್ನು ಕನಸಿನಲ್ಲಿಯೂ ಸಹ ಕಲ್ಪಿಸಿಕೊಳ್ಳಲಾರೆವು. ತಿನ್ನಲು ಏನೂ ಆಹಾರವಿಲ್ಲದೆ ಕಡೆಗೆ ಸತ್ತ ಸ್ನೇಹಿತರ ಶವಗಳನ್ನೇ ತಿನ್ನುವ ಪಾಡು ಇನ್ಯಾರಿಗೂ ಬಾರದಿರಲಿ ಎಂದೆನಿಸಿಬಿಡುತ್ತದೆ . ಬದುಕುಳಿಯಲು ಇರುವ ಛಲ ಮತ್ತು ಬದುಕಲು ಪಡುವ ಕಷ್ಟ ಎರಡೂ ನಮ್ಮ ಕಣ್ತೆರೆಸುತ್ತವೆ. ಜೀವನದ ಬಗೆಗಿನ ನಮ್ಮ ವ್ಯಾಖ್ಯಾನವೇ ಬದಲಾಗಿಬಿಡುತ್ತದೆ.ದೇವರ ಬಗೆಗಿನ ನಂಬಿಕೆ ಮತ್ತು ದೇವರೆಂದರೆ ಯಾರು ? ಏನು ?ಎಂಬ ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿದರೂ ಉತ್ತರಗಳಿಗೆ ಹಲವಾರು ದಾರಿಗಳು ತೆಗೆದುಕೊಂಡಂತೆ ಎನಿಸುತ್ತದೆ . ಕೆಲವೆಡೆ ಸ್ವಲ್ಪ ಸಿನಿಮೀಯ ಅನಿಸಿದರೂ ಎಲ್ಲಿಯೂ ಸಹ ನಾವು ಆಸಕ್ತಿ ಕಳೆದು ಕೊಳ್ಳದಂತೆ ಕಥೆಯನ್ನು ನಿರೂಪಿಸುವ ಕಥೆಗಾರ ಯಶಸ್ವಿಯಾಗಿದ್ದಾರೆ ಮತ್ತು ಅದನ್ನುಅಷ್ಟೇ ಭಾವಪೂರ್ಣವಾಗಿ ,ಆಪ್ತವಾಗಿ , ಅಷ್ಟೇ ಸಂವೇದನಾ ಪೂರ್ಣವಾಗಿ ಅನುವಾದಿಸುವಲ್ಲಿ ಸಂಯುಕ್ತಾ ರವರು ಸಹ ಯಶಸ್ವಿಯಾಗಿದ್ದಾರೆ . ಈ ಪುಸ್ತಕ ಹಲವಾರು ಜನರ ಬಾಳನ್ನು ಬೆಳಕಾಗಿಸಬಲ್ಲುದು ಎಂಬುದು ಮೂಲ ಬರಹಗಾರರ ಆಶಯವಾಗಿತ್ತು. ಕನ್ನಡಕ್ಕೆ ಅನುವಾದಗೊಂಡ ಈ ಪುಸ್ತಕವು ಕನ್ನಡಿಗರ ಬಾಳನ್ನು ಸಹ ಬೆಳಗಿಸಬಲ್ಲುದು ಎಂಬುದನ್ನು ಸಂಯುಕ್ತಾ ಅವರ ಅನುವಾದ ಸಾಧಿಸಬಲ್ಲದು ಎಂಬ ಆಶಯ ನಮಗಿದೆ .ಕನ್ನಡಕ್ಕೆ ನನಿಜವಾಗಿಯೂ ಇಂತಹ ಅನುವಾದಕರ ಅವಶ್ಯಕತೆ ಇದೆ . ಕನ್ನಡಕ್ಕೆ ಇಂತಹ ಪುಸ್ತಕಗಳ ಅವಶ್ಯಕತೆ ಬಹಳ ಇದೆ. ಇಂತಹ ಅದ್ಭುತವಾದ ಪುಸ್ತಕವನ್ನು ಕೊಟ್ಟಂತಹ ಸಂಯುಕ್ತಾ ರವರಿಗೆ ಮತ್ತೊಮ್ಮೆ ಧನ್ಯವಾದಗಳು.