Monday, July 16, 2018

ಶಿಖರಸೂರ್ಯ

ಪುಸ್ತಕದ ಹೆಸರು: ಶಿಖರಸೂರ್ಯ
ಲೇಖಕರು: ಚಂದ್ರಶೇಖರ ಕಂಬಾರ 
ಪ್ರಕಾಶಕರು: ಅಂಕಿತ ಪುಸ್ತಕ 

 " ಗಣಪತಿ ಮದುವೆಗೆ  ನೂರೆಂಟು ವಿಘ್ನ" . ಮುಂದೆ ನಾನು ಹುಟ್ಟಿ ಈ ಗಾದೆಯನ್ನು ಒಂದು ಕೋಟಿ  ಸರ್ತಿ ಬಳಸುತ್ತೇನೆ ಎಂದು ತಿಳಿದೇ ಹಿರಿಯರು ಈ ಗಾದೆಯನ್ನು ಬಹಳ ಹಿಂದೆಯೇ  ಮಾಡಿಟ್ಟು ಹೋಗಿದ್ದಾರೆ ಅಂತ ಅನಿಸಿದೆ. ಈ ಪುಸ್ತಕದ ಓದಿನ ವಿಷಯದಲ್ಲಿ ಈ ಗಾದೆ ನೂರು ಪ್ರತಿಶತ ಸತ್ಯ. 
ಮೊದಲ ನೂರಾ ಮೂರು  ವಿಘ್ನಗಳು , ಕಾದಂಬರಿ ತರಿಸಿದ ತಕ್ಷಣ ನಾನು ಓಡಲಾರದೆ ಮೂರು  ವರ್ಷ ಸುಮ್ಮನೆ ಇಟ್ಟದ್ದು. 
 ನೂರಾನಾಲ್ಕು: ಓದುವಾಗ ಈ ಕಾದಂಬರಿ ಗೆ ಮೊದಲು ಚಕೋರಿ ಓದಬೇಕು ಎಂದು ಗೊತ್ತಾಗಿದ್ದು. 
ನೂರಾ ಐದು : ಚಕೋರಿ ಪುಸ್ತಕ ಕೈಗೆ ಸಿಗಲು ಒಂದು ವಾರ ತಡವಾಗಿದ್ದು. 
ನೂರಾ ಆರು : ಚಕೋರಿ ಮುಗಿಸಿ ಶಿಖರ ಸೂರ್ಯ ಪ್ರಾರಂಭಿಸಿ ಅರ್ಧ ಮುಗಿಸುವ ಹೊತ್ತಿಗೆ ಹಳಗನ್ನಡ ಎಕ್ಸಾಂ ಅನೌನ್ಸ್ ಆಗಿದ್ದು. 
ನೂರಾ ಏಳು: ಹಳಗನ್ನಡ ಪರೀಕ್ಷೆ ಮುಗಿಯುವ ಹೊತ್ತಿಗೆ ನನಗೆ ಕಪ್ಪಂಚು ಬಿಳಿಸೀರೆ ಕಾದಂಬರಿ ಸಿಕ್ಕಿದ್ದು !
ನೂರಾ ಎಂಟು: ಕಪ್ಪಂಚು ಬಿಳಿಸೀರೆ ಮುಗಿಸುವ ಹೊತ್ತಿಗೆ ಮಧುವನ ಸಿಕ್ಕಿದ್ದು. 

ಹೀಗೆ ಹೇಗೋ ಆಗಿ ಕಡೆಗೆ ಒಂದು ದಿನ  ದೃಢ ನಿಶ್ಚಯ ಮಾಡಿ, ಕಾದಂಬರಿ ಹಿಡಿದು ಕುಳಿತು ಒಂದೇ ಗುಕ್ಕಿಗೆ ಓದಿ ಮುಗಿಸಿದ್ದು. ಕಂಬಾರರ ನಾಲ್ಕು ಕಾದಂಬರಿಗಳನ್ನು ಸತತವಾಗಿ ಓದಲಾರಂಭಿಸಿದ ಮೇಲೆ ಅವರ ಬರಹ ಶೈಲಿ ಮತ್ತು ಯೋಚನಾ ಲಹರಿಗಳು ತಕ್ಕಮಟ್ಟಿಗೆ ಅರ್ಥವಾಗತೊಡಗಿತು. ಶಿಖರಸೂರ್ಯದಲ್ಲಿ ಅವರ ಕಥನ ಶಕ್ತಿಯ ವಿಶ್ವರೂಪ ದರ್ಶನ ಆಯಿತು. 

ಕಾದಂಬರಿ ಸಂಪೂರ್ಣವಾಗಿ ಕಾಲ್ಪನಿಕವಾದರೂ, ಅದರ ಮೂಲ ಜಾನಪದದಲ್ಲಿ ಜೀವಂತವಾಗಿರುವ ನಾಗಾರ್ಜುನನ ಕಥೆ.
ಶಿಖರಸೂರ್ಯ  ಎಂಬುದು ಒಂದು ಕಾಲ್ಪನಿಕ ಪಾತ್ರ. ಚಕೋರಿಯಲ್ಲಿ ಚಿನ್ನಮುತ್ತ ಎಂಬ ಪಾತ್ರದ ಮುಂದುವರೆದ ಭಾಗವಾಗಿ ಚಿನ್ನಮುತ್ತ ಶಿಖರಸೂರ್ಯನಾಗುತ್ತಾನೆ. ಚಿನ್ನಮುತ್ತ ಶಿಖರಸೂರ್ಯನಾಗಲು ತೆಗೆದುಕೊಳ್ಳುವ ಸಮಯ ಅತ್ಯಲ್ಪ ಶ್ರಮ ಬಹಳ. ಅನೇಕ ಕುಯುಕ್ತಿಗಳನ್ನು ಬಳಸಿ ತಾನು ವಿಷವಿದ್ಯೆಯನ್ನು ಕಲಿಯುತ್ತಾನೆ. . ಶಿಖರ ಸೂರ್ಯನಾದ ಮೇಲೆ ಅವನ ಹೆಸರಲ್ಲಷ್ಟೇ ಅಲ್ಲ, ವ್ಯಕ್ತಿತ್ವದಲ್ಲೂ ಬಹಳ ಬದಲಾವಣೆಗಳಾಗುತ್ತವೆ.  ಸೇಡು, ಹಠ ಮತ್ತು ಮಹತ್ವಾಕಾಂಕ್ಷೆ ಎನ್ನುವುದು ಮನುಷ್ಯನನ್ನು ಏನೆಲ್ಲಾ ಮಾಡಬಲ್ಲದು, ಮತ್ತು ಏನೇನೆಲ್ಲಾ ಮಾಡಿಸಬಲ್ಲದು ಎಂಬುದಕ್ಕೆ ಕನಕಪುರಿ ಸಾಮ್ರಾಜ್ಯ ಮತ್ತು ಶಿಖರ ಸೂರ್ಯ ಸಾಕ್ಷಿಯಾದರೆ, ಒಳ್ಳೆತನ ಮನುಷ್ಯನನ್ನು ಹೇಗೆ ಮುನ್ನೆಡೆಸುತ್ತದೆ ಎನ್ನುವುದಕ್ಕೆ ಶಿವಾಪುರ, ಶಿವಪಾದ, ನಿನ್ನಡಿ,ಮುದ್ದುಗೌರಿ ಮತ್ತು ರವಿಕೀರ್ತಿ ಸಾಕ್ಷಿಯಾಗುತ್ತಾರೆ 

ಈ ಕಾದಂಬರಿಯಲ್ಲಿ ನಮ್ಮನ್ನು ಬಹಳವಾಗಿ ಕಾಡುವ ಪಾತ್ರ ಶಿವಪಾದ , ಚಂಡೀದಾಸ ಮತ್ತು ಮುದ್ದುಗೌರಿಯದು. ವಿದ್ಯುಲ್ಲತೆ ಕೂಡಾ ಮನಸ್ಸನ್ನು ಬಹಳಕಾಲ ಆವರಿಸಿರುತ್ತಾಳೆ. ಮಹಾರಾಣಿಯ ಪಾತ್ರ ಸ್ವಲ್ಪ ಎಳೆದಂತೆ ಅನಿಸುತ್ತದೆ. ಶಿಖರ ಸೂರ್ಯ ಮತ್ತು ಅವಳ ಭೇಟಿಯ ಆ ಪ್ರಸಂಗದ ಅಗತ್ಯವಿರಲಿಲ್ಲ ಎಂದು ನನ್ನ ಅಭಿಪ್ರಾಯ. ಛಾಯಾದೇವಿ ಮತ್ತು ಚಿಕ್ಕಮ್ಮಣ್ಣಿಯರ ಅಸಹಾಯಕತೆ ಸ್ವಲ್ಪ ಜಿಗುಪ್ಸೆ ತರಿಸುತ್ತದೆ. 

ಕಥೆಯ ಓಘ ಪೂರ್ವಾರ್ಧದಲ್ಲಿ ನಮ್ಮನ್ನು ಎಡೆಬಿಡದಂತೆ ಓದಿಸಿಕೊಂಡು ಹೋಗುತ್ತದೆ, ಉತ್ತರಾರ್ಧ ಸ್ವಲ್ಪ ಹಿಡಿ ತಪ್ಪಿದೆ. ಇದು ಲೇಖಕರಿಗೂ ಪ್ರಾಯಶ: ಅರಿವಾಗಿ ಅಂತ್ಯದಲ್ಲಿ ಬಿಗಿಯನ್ನು ಮತ್ತೆ ತಂದಿದ್ದಾರೆ. ಕಾದಂಬರಿಯ ಅಂತ್ಯ ಸ್ವಲ್ಪ predictable ಆದರೂ ಅದನ್ನು ಹೇಳಿರುವ ರೀತಿ ವಿಶೇಷವಾಗಿದೆ. ಕಾಲ್ಪನಿಕ ಪಾತ್ರದ ಅಂತ್ಯವನ್ನು ಓದುಗರ ಕಲ್ಪನೆಗೆ ಬಿಟ್ಟದ್ದು ಸ್ವಲ್ಪ ಇಷ್ಟ ಆಯಿತು ನನಗೆ.

ಇನ್ನು ಕಂಬಾರರ ಕಥನ ಶೈಲಿಯ ಬಗ್ಗೆ ನಾನು ಏನು ತಿಳಿದೆ  ಅನ್ನುವುದರ ಬಗ್ಗೆ ಸ್ವಲ್ಪ ಬರೆಯಬೇಕು. ಇದು ನಾನು ಓದುತ್ತಿರುವ ಕಂಬಾರರ ಮೂರನೆಯ ಕಾದಂಬರಿ. ಎಲ್ಲಾ ಕಾದಂಬರಿಗಳ ಮೂಲಸ್ಥಾನ ಶಿವಾಪುರ. ಧರ್ಮದ ಸೆಲೆ ಶಿವಪಾದ. ಎಲ್ಲವು ಅವನ ಕರುಣೆ. ಮಾತೃ ಸಂಸ್ಕೃತಿ ಪ್ರಧಾನ ವ್ಯವಸ್ಥೆ ವಿಜೃಂಭಿಸುತ್ತದೆ. ಪ್ರಕೃತಿಗೆ ಮಾನವ ಅಭಿವೃದ್ಧಿಯ ಹೆಸರಿನಲ್ಲಿ ನೀಡುತ್ತಿರುವ ಹಿಂಸೆಯನ್ನು ಕಂಬಾರರು ಬಹಳ ವಿಶಿಷ್ಟ ರೀತಿಯಲ್ಲಿ ಹೇಳುತ್ತಾ ಸಾಗುತ್ತಾರೆ. ಇದು ಒಂಥರಾ ಆಧುನಿಕ ಸಮಸ್ಯೆಯನ್ನು ಫೇರಿಟೇಲ್ ರೀತಿಯಲ್ಲಿ ಹೇಳಿದ ಹಾಗಿರುತ್ತದೆ. ಶಿವನ ಡಂಗುರ ಕಾದಂಬರಿಯಲ್ಲಿ  globalisation ವಸ್ತುವಾದರೆ, ಚಕೋರಿಯಲ್ಲಿ ಸಂಗೀತಗಾರನ fantasy ಅವನಿಗೆ ಹೇಗೆ ಮಾರಕವಾಗುತ್ತದೆ ಎಂಬುದರ ಚಿತ್ರಣವಿದೆ. ಶಿಖರಸೂರ್ಯ alchemist ಒಬ್ಬನ ಕಥೆ. ಹಾಗಾಗಿ, ಕಂಬಾರರ ಕಥಾ canvas ಬೇರೆಯಾದರೂ ಪಾತ್ರಗಳು ಸರಿಸುಮಾರು ಒಂದೇ. (ನಾನು ಓದಿರುವ ಮೂರೂ ಕಾದಂಬರಿಗಳ ಬಗ್ಗೆ ಹೇಳುತ್ತಿರುವುದು), ಶಿಖರ ಸೂರ್ಯ ಕಾದಂಬರಿಯ ಮುನ್ನುಡಿ ನನಗೆ ಒಂದು ಪದವು ಅರ್ಥವಾಗಿರಲಿಲ್ಲ. ಕಾದಂಬರಿ ಪೂರ್ತಿ ಓದಿದ ಮೇಲೆ ಮುನ್ನುಡಿಯ ಮೊದಲ ಪುಟ ಅರ್ಥವಾಗಿದೆ ಅಷ್ಟೇ.
ಮೂರೂ  ಕಾದಂಬರಿಗಳಲ್ಲಿ ನನಗೆ ಚಕೋರಿ  ಹೆಚ್ಚು ಇಷ್ಟವಾಯಿತು.


   

No comments:

Post a Comment