ಪುಸ್ತಕದ ಹೆಸರು: ಹೊರಳುದಾರಿ
ಲೇಖಕರು: ತೇಜಸ್ವಿನಿ ಹೆಗಡೆ
ಪ್ರಕಾಶಕರು:ಸ್ವಸ್ತಿ ಪ್ರಕಾಶನ
ಕಾದಂಬರಿಗಳಿಗೆ ಬಹುಮಾನ ಕೊಡುವ ಸ್ವಸ್ತಿ ಪ್ರಕಾಶನಕ್ಕೆ ಮೊದಲು ಅಭಿನಂದಿಸಬೇಕು. ಇಲ್ಲದಿದ್ದರೆ ಇಂತಹಾ ಕಾದಂಬರಿ ಓದುವ ಅವಕಾಶ ನಮಗೆ ಸಿಗುತ್ತಿರಲಿಲ್ಲ.
ಲೇಖಕಿಯೇ ಮುನ್ನುಡಿಯಲ್ಲಿ ಬರೆದುಕೊಂಡಂತೆ, ಇದು ಅವರ ಚೊಚ್ಚಲ ಕಾದಂಬರಿ. ಹೆದರಿ ಹೆದರಿ ಹೆಜ್ಜೆ ಮುಂದಿಡುತ್ತಾ ಹೋಗಿರುವುದು ಕಾದಂಬರಿಯುದ್ದಕ್ಕೂ ಕಾಣಿಸುತ್ತದೆ. ಒಂದೆರಡು ಕಡೆ ಬಿದ್ದೂ ಇದ್ದಾರೆ. ಆದರೆ ಕಡೆಯಲ್ಲಿ ಸ್ವಸಾಮರ್ಥ್ಯದಲ್ಲಿ ಎದ್ದು ನಿಂತು ಕಾದಂಬರಿಯನ್ನು ಗೆಲ್ಲಿಸಿದ್ದಾರೆ.
ಈ ಕಾದಂಬರಿಯಲ್ಲಿ ಬಹಳ ಇಷ್ಟವಾಗುವುದು ಈಗೀಗ ಮಾಯವೇ ಆಗುತ್ತಿರುವ ಕುಟುಂಬದ ಆಪ್ತತೆ. ಅಜ್ಜ, ದೊಡ್ಡಮ್ಮ, ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ, ಇವೆಲ್ಲವೂ ಕೇವಲ ಶಬ್ದಕೋಶಗಳಲ್ಲಿ ಮಾತ್ರ ಉಳಿದುಹೋಗುತ್ತಿರುವ ಈ ಕಾಲದಲ್ಲಿ, ಅದನ್ನು ಪಾತ್ರಗಳಲ್ಲಿ ಜೀವಂತವಾಗಿರುವುದು ಖುಷಿ ತರುತ್ತದೆ. ಮಲೆನಾಡಿನ ಕಡೆಯ ಕನ್ನಡ ಭಾಷೆಯ ಸೊಗಡು, ಆ ಪ್ರದೇಶದಷ್ಟೇ ಮನೋಹರವಾಗಿದೆ. ಕಥೆಯು ಮೊದಲು ನಿಧಾನಕ್ಕೆ ಸಾಗುತ್ತದೆ, ಅದು ವೇಗ ಪಡೆಯಲು ಹೆಚ್ಚು ಸಮಯ ತೆಗೆದುಕೊಂಡಿದೆ. ಇದನ್ನು ಲೇಖಕಿಯವರು ಗಮನಿಸಬೇಕು. ಇದು ಓದುಗನ ತಾಳ್ಮೆಯನ್ನು ಕೆಡಿಸುವ ಅಪಾಯವಿದೆ.
ಕಾದಂಬರಿಯ ಕಥಾ ವಸ್ತು ಹೊಸದಲ್ಲ. ನಿರೂಪಣೆ ಕೂಡಾ . ಆದರೆ ಇಲ್ಲಿ ಇಷ್ಟವಾಗುವುದು, ಕಥನ ತಂತ್ರ. ಅದಕ್ಕೆ ಅದರದ್ದೇ ಬೇರೆ ಶೈಲಿ ಇದೆ. ಕಾದಂಬರಿ ಮೆಚ್ಚುಗೆ ಪಡೆಯುವುದು ಇದಕ್ಕೇ.
ಮನಸ್ಸು ಮಾಡಿದರೆ ೩ ಗಂಟೆಗಳಲ್ಲಿ ಓದಿ ಮುಗಿಸಬಹುದಾದ ಕಾದಂಬರಿಯನ್ನೋದಲು ನಾನು ಎರಡು ದಿನ ತೆಗೆದುಕೊಂಡಿದ್ದೇನೆ. ಈ ಕಾದಂಬರಿ ಮಲೆನಾಡಿನಲ್ಲಿ ಸುತ್ತಾಡಿದ ಅನುಭವ ಕೊಡುತ್ತದೆ. ಕಥೆ ಖಂಡಿತಾ ಮನಸ್ಸಿಗೆ ನಾಟುತ್ತದೆ. ನನಗೆ ಇಲ್ಲಿ ಎಲ್ಲರಿಗಿಂತ ಇಷ್ಟವಾಗಿದ್ದು ವಿನೋದನ ಪಾತ್ರ. ಈ ಪಾತ್ರದ ವೈಶಿಷ್ಟ್ಯ ತಿಳಿಯಲು ಪುಸ್ತಕವನ್ನು ಓದಿ.
ಹಂಸಯಾನ ಬರೆಯುವ ಹೊತ್ತಿಗೆ ಲೇಖಕಿ ಬಹಳ ಜಾಗರೂಕರಾಗಿದ್ದಾರಾದ್ದರಿಂದ, ಹೊರಳುದಾರಿಗಿಂತಲೂ ಹಂಸಯಾನ ನನಗೆ ವೈಯಕ್ತಿಕವಾಗಿ ಇಷ್ಟವಾಗಿದೆ.
No comments:
Post a Comment