Tuesday, March 6, 2018

Enigmas of Karnataka

ಪುಸ್ತಕದ ಹೆಸರು:  Enigmas of Karnataka
ಲೇಖಕರು: ಎಸ್.ಶ್ಯಾಂ ಪ್ರಸಾದ್
ಪ್ರಕಾಶಕರು: ನೋಷನ್ ಪ್ರೆಸ್

ಈ ಹಳಗನ್ನಡದ ಆಸಕ್ತಿ, ನಮ್ಮ ಕನ್ನಡದ ಚರಿತ್ರೆಯ ಆಸಕ್ತಿ ನನ್ನಿಂದ ಇನ್ಯಾವ್ಯಾವ ಪುಸ್ತಕಗಳನ್ನು ಓದಿಸುತ್ತದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ, ನಮ್ಮ ಭಾಷೆ, ಊರು, ಚರಿತ್ರೆಯ ಹಿಂದೆ ಬಿದ್ದವಳಾದ ನನಗೆ ಈ ಪುಸ್ತಕ ದೊರೆತಿದ್ದು ಒಳ್ಳೆಯದಾಯಿತು. ಹೀಗೇ ಫೇಸ್ ಬುಕ್ ನಲ್ಲಿ ಈ ಪುಸ್ತಕದ ಬಗ್ಗೆ ರಿವ್ಯೂ ಓದಿದೆ. ಮುಂದೆಂದಾದರೂ ಓದೋಣವೆಂದು ಸುಮ್ಮನಿದ್ದೆ. ಮುನ್ನೋಟ ಪುಸ್ತಕದ ಮಳಿಗೆಯ ಆನ್ಲೈನ್ ಪುಸ್ತಕದ ಜಾಲತಾಣದಲ್ಲಿ ಈ ಪುಸ್ತಕ ಕಣ್ಣಿಗೆ ಬಿದ್ದ ತಕ್ಷಣವೇ ಕೊಂಡುಕೊಂಡೆ. ಮೂರೇ ದಿನದಲ್ಲಿ ಪುಸ್ತಕ ಮನೆಗೆ ತಲುಪಿತು. ಶಿಖರ ಸೂರ್ಯ ಕಾದಂಬರಿ ಓದಲು ಹೋದವಳು ಇದು ಕೈ ಸೇರಿದ್ದೇ ಇದರ ಒಳಗೆ ನುಗ್ಗಿದೆ.

ದಂತಕಥೆಗಳ ಸತ್ಯಾಸತ್ಯತೆಗಳನ್ನು ಒರೆಗೆ ಹಚ್ಚುವ ಉತ್ತಮ ಪುಸ್ತಕಗಳಲ್ಲಿ ಇದೂ ಒಂದು. ಇದರಲ್ಲಿಯ ಕೆಲವು ವಿಷಯಗಳು ಹಳಗನ್ನಡ ತರಗತಿಯಲ್ಲಿ ಚರ್ಚಿತವಾಗಿತ್ತಾದರೂ, ಕೆಲವು ವಿಷಯಗಳು ನನಗಂತೂ ಹೊಸದು. ವಿಷ್ಣುವರ್ಧನನ ಸಿಂಹ ಲಾಂಛನದಿಂದ ಹಿಡಿದು, ಬೆಂಗಳೂರಿನ ಕಡಲೆಕಾಯಿ ಪರಿಷೆ ಮತ್ತು ವೊಡೆಯರ್ ವಂಶಾವಳಿಯ ವಂಶವೃಕ್ಷದ ವರೆಗೆ ಹಲವು ಸತ್ಯಗಳನ್ನು ಬಿಚ್ಚಿಡುತ್ತಾ,  ಈ ಎನಿಗ್ಮಾ ಹಲವು ಅಧ್ಯಾಯಗಳಲ್ಲಿ ನಮ್ಮನ್ನು ಆಶ್ಚರ್ಯಪಡಿಸುತ್ತಾ ಹೋಗುತ್ತದೆ. ಇಲ್ಲಿ ನೀಡಿರುವ ಪೂರಕ ಚಿತ್ರಗಳ ಗುಣಮಟ್ಟ ಬಹಳ ಚೆನ್ನಾಗಿದೆ.  ಎಪ್ಪತ್ತೈದು ಪುಟಗಳ ಈ ಹೊತ್ತಗೆಯನ್ನು ಒಂದುವರೆ ಘಂಟೆಗಳಲ್ಲಿ ಓದಿ ಮುಗಿಸಿದೆ. ಓಘದಲ್ಲಿ ಈ ಪುಸ್ತಕ ಯಾವ ಥ್ರಿಲ್ಲರ್ ಗೂ ಕಡಿಮೆ ಇಲ್ಲ.

ಲೇಖಕರು ಸಿನಿ ಪತ್ರಕರ್ತರಾದರೂ non fiction ಪುಸ್ತಕ ಬರೆದು ನಿಜವಾಗಲೂ ತಮ್ಮನ್ನು ತಾವು ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ.ತಮ್ಮ ವಾದಕ್ಕೆ ಪೂರಕವಾಗಿ ಅವರು ದಾಖಲೆ ನೀಡಿರುವ ಸುಮಾರು ಪುಸ್ತಕಗಳನ್ನು ನಾನು ಓದಿದ್ದೇನೆ ಎಂಬುದು ಒಂದು ಸಮಾಧಾನಕರ ಸಂಗತಿ. ಬಹಳಷ್ಟು ಇನ್ನೂ ಓದಬೇಕಾಗಿದೆ ಎಂಬುದು ಗಮನಾರ್ಹವಾದ ಸಂಗತಿ. ಓದುಗನನ್ನು ಇಸವಿ ದಿನಾಂಕಗಳಲ್ಲಿ ಕಳೆದುಹೋಗುವಂತೆ ಮಾಡದೇ, ಘಟನಾವಳಿಗಳ ಮೂಲಕ ಸೆಳೆಯುವ ಲೇಖಕರ ತಂತ್ರಗಾರಿಕೆ ಮತ್ತು ವಿವರಣ ಶೈಲಿ ಚೆನ್ನಾಗಿದೆ. ಇಲ್ಲಿ ಅವರು ತಿಳಿಸಿರುವ ಕೆಲವು ಕಹಿಸತ್ಯವನ್ನು ಅರಗಿಸಿಕೊಳ್ಳುವ ಧೈರ್ಯ ನಮಗಿರಬೇಕು, ಅಷ್ಟೇ.

 ಈ ಪುಸ್ತಕ ನಮ್ಮನ್ನು ಮತ್ತಷ್ಟು ಕಥೆಗಳ ಹಿಂದಿನ ಸತ್ಯದ ಹುಡುಕಾಟಕ್ಕೆ ಹಚ್ಚುವುದಂತೂ ನಿಜ. ಕನ್ನಡಿಗರು ಓದಲೇ ಬೇಕಾದ ಹಲವು ಆಂಗ್ಲ ಪುಸ್ತಕಗಳಲ್ಲಿ ಇದೂ ಒಂದು.

No comments:

Post a Comment